ADVERTISEMENT

1,650 ಹುದ್ದೆ ಭರ್ತಿಗೆ ಚಾಲನೆ: ಸಚಿವ ಎಸ್.ಎ. ರವೀಂದ್ರನಾಥ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 6:55 IST
Last Updated 8 ಫೆಬ್ರುವರಿ 2011, 6:55 IST

ದಾವಣಗೆರೆ: ತೋಟಕಾರಿಕಾ ಇಲಾಖೆಯಲ್ಲಿ ಖಾಲಿ ಇರುವ 1,650 ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಸಕ್ಕರೆ ಹಾಗೂ ತೋಟಗಾರಿಕೆ ಸಚಿವ ಎಸ್.ಎ.ರವೀಂದ್ರನಾಥ್ ತಿಳಿಸಿದರು.

ಹಾಪ್‌ಕಾಮ್ಸ್ ವತಿಯಿಂದ ನೂತನವಾಗಿ ನಿಯೋಜಿಸಿರುವ ತರಕಾರಿ ಮಾರಾಟದ ವಾಹನಗಳಿಗೆ ಸೋಮವಾರ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಖಾಲಿ ಇರುವ ಹುದ್ದೆಗಳ ಭರ್ತಿಗೆ ಅನುಮತಿ ಕೋರಿ ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ. ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ವಾಹನದ ಕೊರತೆ ಇದ್ದು, 100 ವಾಹನ ಖರೀದಿಗೆ ನಿರ್ಧರಿಸಲಾಗಿದೆ.  ಅಧಿಕಾರಿಗಳು ಆಯಾ ಕೇಂದ್ರಗಳಲ್ಲೇ ಉಳಿದುಕೊಳ್ಳಲು ಸೂಚಿಸಲಾಗಿದೆ. ನೂತನ ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಹಾಗೂ ಕಾಲೇಜುಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಕೋರಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ 13 ತೋಟಗಾರಿಕಾ ಫಾರಂಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ಇದು ಕೇಂದ್ರ ಹಾಗೂ ರಾಜ್ಯಗಳು ಸೇರಿ ತೆಗೆದುಕೊಂಡ ನಿರ್ಧಾರ ಎಂದು ಸಮರ್ಥಿಸಿಕೊಂಡರು.

ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಸಚಿವ ಸಂಪುಟದ ನಿರ್ಧಾರ ನಾಲೆಗಳಿಗೆ ಅನ್ವಯಿಸುವುದಿಲ್ಲ. ನಾಲೆಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಪಂಪ್‌ಸೆಟ್ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಂಗಳೂರಿನಲ್ಲಿ 290 ಹಾಪ್‌ಕಾಮ್ಸ್ ಮಾರಾಟ ಕೇಂದ್ರಗಳಿದ್ದು, ಅದರಲ್ಲಿ 110 ಕೇಂದ್ರಗಳನ್ನು ಈಗಾಗಲೇ ಕಂಪ್ಯೂಟರೀಕರಣ ಮಾಡಲಾಗಿದೆ. ಇದರಿಂದ ದರಪಟ್ಟಿಯಲ್ಲಿ ಏಕರೂಪತೆ ತರಲು ಸಾಧ್ಯವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.