ದಾವಣಗೆರೆ:ಸಂತ ಸೇವಾಲಾಲರ ಪುಣ್ಯಕ್ಷೇತ್ರ ಸೂರಗೊಂಡನಕೊಪ್ಪದಅಭಿವೃದ್ಧಿಗಾಗಿ ಕುಡಿಯುವ ನೀರಿನ ವ್ಯವಸ್ಥೆಗೆ ₹ 76 ಕೋಟಿ ಮಂಜೂರಾಗಿದ್ದು, ₹ 46 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಂತ ಸೇವಾಲಾಲರ 282ನೇ ಜಯಂತಿಯನ್ನು ಕೋವಿಡ್ಕಾರಣ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸೋಣ.ಕಡಿಮೆ ಸಂಖ್ಯೆಯಲ್ಲಿ ಮಾಲಾಧಾರಿಗಳು ಹಾಗೂ ಭಕ್ತರು ಜಾತ್ರೆಗೆ ಬರುವಂತೆ ನೋಡಿಕೊಳ್ಳಬೇಕು. ಈ ಸಂಬಂಧ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿ ಭಕ್ತರ ಮನವೊಲಿಸಬೇಕು ಎಂದು ಹೇಳಿದರು.
ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್, ‘ಈ ವರ್ಷದ ಜಾತ್ರೆಗೆ ಮುನ್ನ ಕೋವಿಡ್ಗೆ ಲಸಿಕೆ ದೊರೆತು ಕೋವಿಡ್ ತೊಲಗಲಿ ಎಂಬ ಆಶಯದೊಂದಿಗೆ ಜಾತ್ರೆ ಆಚರಿಸೋಣ. ಸರ್ಕಾರದ ಮಾರ್ಗಸೂಚಿಯಂತೆ ಜಾತ್ರೆ ನಡೆಸಲು ಎಲ್ಲರ ಸಹಕಾರ ಬೇಕು’ ಎಂದರು.
ಚಿನ್ನಿಕಟ್ಟೆಯಿಂದ ಕ್ಷೇತ್ರದವರೆಗೆ ರಸ್ತೆಯ ಎರಡೂ ಬದಿ ಜಂಗಲ್ ಕಟಿಂಗ್, ರಸ್ತೆಯ ಪಾಥ್ ಹೋಲ್ ಮುಚ್ಚುವ ಕಾರ್ಯ ಆಗಬೇಕು. ಕ್ಷೇತ್ರದಲ್ಲಿ ನಿಗಮದಿಂದ ಜಮೀನು ಖರೀದಿ ಪ್ರಕ್ರಿಯೆ ನಡೆದಿದ್ದು, ಆ ಜಮೀನನ್ನು ವಾಹನ ಪಾರ್ಕಿಂಗ್ಗೆ ಬಳಸಿಕೊಳ್ಳಬಹುದು. ಜಾತ್ರೆ ಫೆ.14, 15 ರಂದು ನಡೆಯಲಿದ್ದು, ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬರುತ್ತಿದ್ದಾರೆ. ಅಗತ್ಯ ಸಿದ್ಧತೆ ಮಾಡಬೇಕು ಎಂದು ಹೇಳಿದರು.
ಸಂತ ಸೇವಾಲಾಲ್ ಪ್ರತಿಷ್ಠಾನದ ಅಧ್ಯಕ್ಷ ರುದ್ರಪ್ಪ ಲಮಾಣಿ, ‘ರೂಪಾಂತರ ಕೊರೊನಾ ಪ್ರಕರಣ ಶಿವಮೊಗ್ಗದಲ್ಲಿ ಕಂಡು ಬಂದಿದ್ದು, ಶಿವಮೊಗ್ಗ ಸೂರಗೊಂಡನಕೊಪ್ಪ ಕ್ಷೇತ್ರಕ್ಕೆ ಹತ್ತಿರವಾಗಿರುವುದರಿಂದ ಸಂದರ್ಭವನ್ನು ನೋಡಿಕೊಂಡು ಜಾತ್ರೆ ಆಚರಿಸಬೇಕಾಗುತ್ತದೆ’ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಅಗತ್ಯ ಮುಂಜಾಗ್ರತೆಯೊಂದಿಗೆ ಜಾತ್ರೆ ನಡೆಯಬೇಕಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜಾತ್ರೆ ಆಚರಿಸಲಾಗುವುದು’ ಎಂದರು.
ಸಭೆಯಲ್ಲಿ ಮುಖ್ಯಮಂತ್ರಿ ಮಾಜಿ ಆಪ್ತ ಕಾರ್ಯದರ್ಶಿ ಹೀರಾನಾಯ್ಕ್, ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಎಸ್ಪಿ ಹನುಮಂತರಾಯ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ಭೋಜ್ಯನಾಯಕ್, ಸಂತ ಸೇವಾಲಾಲ್ ಪ್ರತಿಷ್ಠಾನದ ಸದಸ್ಯರಾದ ಸವಿತಾ ಶಿವಕುಮಾರ್, ಗಿರೀಶ್, ಭರತ್ ನಾಯ್ಕ, ಕವಿತಾಬಾಯಿ, ತುಳಜಾನಾಯಕ್, ಮತ್ತಿತರೆ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.