ದಾವಣಗೆರೆ: ಬಿಜೆಪಿ ರೈತ ಮೋರ್ಚಾ ವತಿಯಿಂದ ಸಿರಿಧಾನ್ಯಗಳ ವರ್ಷಾಚರಣೆ ಹಾಗೂ ರೈತ ಬಂಧು ಫಲಾನುಭವಿಗಳ ಸಮಾವೇಶ ಏ.26ರಂದು ಬೆಳಿಗ್ಗೆ 11ಕ್ಕೆ ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
‘ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಾರ್ಯಕ್ರವನ್ನು ಉದ್ಘಾಟಿಸಲಿದ್ದು, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ.ರಾಮಚಂದ್ರ, ಮಾಡಾಳ್ ವಿರೂಪಾಕ್ಷಪ್ಪ, ಎಂ.ಪಿ.ರೇಣುಕಾಚಾರ್ಯ, ಪ್ರೊ.ಲಿಂಗಣ್ಣ, ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ್, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಪಾಲ್ಗೊಳ್ಳುವರು’ ಎಂದು ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ಲೋಕಿಕೆರೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯಲ್ಲಿ 1,53,249 ಫಲಾನುಭವಿಗಳು ಇದ್ದು, ಮಾರ್ಚ್ ಅಂತ್ಯಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಒಟ್ಟು ₹ 354.94 ಕೋಟಿ ಫಲಾನುಭವಿಗಳ ಕೈಸೇರಿದೆ. ಸರ್ಕಾರಗಳಿಂದ ಫಲಾನುಭವಿಗಳಿಗೆ ಏನೇನು ರೈತಪರ ಯೋಜನೆಗಳು ಇವೆ ಎಂಬುದನ್ನು ಮನವರಿಕೆ ಮಾಡಲು ಈ ಸಭೆ ಕರೆಯಲಾಗಿದೆ’ ಎಂದುಹೇಳಿದರು.
‘ಒಂದು ಜಿಲ್ಲೆ ಒಂದು ಒಂದು ಉತ್ಪನ್ನ’ ಯೋಜನೆಯಡಿ ಜಿಲ್ಲೆಯಲ್ಲಿ ಸಿರಿಧಾನ್ಯಗಳನ್ನು ಆಯ್ಕೆ ಮಾಡಿದ್ದು, ಎಕರೆಗೆ ₹ 4 ಸಾವಿರ ಸಹಾಯಧನ ಸಿಗುತ್ತಿದೆ. ಸಿರಿಧಾನ್ಯಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 2022–23 ವರ್ಷವನ್ನು ಸಿರಿಧಾನ್ಯಗಳ ವರ್ಷ ಎಂದು ಪ್ರಧಾನಿ ಘೋಷಿಸಿದ್ದಾರೆ ಎಂದರು.
‘ಸಿರಿಧಾನ್ಯ ಬೆಳೆದ ರೈತರಿಗೆ ಸಂಸ್ಕರಣೆ ಕಷ್ಟವಾಗಿದ್ದು, ಜಿಲ್ಲೆಗೆ 72 ಪ್ರಸ್ತಾವನೆಗಳನ್ನು ನೀಡಲಾಗಿದೆ. ಅದರಲ್ಲಿ 20 ಆಹಾರ ಸಂಸ್ಕರಣೆ ಆಹಾರ ಸಂಸ್ಕರಣಾ ಘಟಕಗಳಿಗೆ ₹ 1.17 ಕೋಟಿ ಸಹಾಯಧನ ನೀಡಲಾಗಿದೆ’ ಎಂದು ಹೇಳಿದರು.
ವೀರೇಶ್ ಟಿ.ಕೆ., ಟಿ.ಕೆ. ಶಿವಕುಮಾರ್, ಕೆ.ಗುಡ್ಡೇಶ ಸಿದ್ದಪ್ಪ, ಬಾತಿ ಶಿವಕುಮಾರ್, ಶಿರಮಳ್ಳಿ ಮಂಜುನಾಥ್, ಗುಮ್ಮನೂರು ವೀರೇಶ್, ಮುರುಗೇಶ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.