ADVERTISEMENT

ಅಶೋಕ ರೈಲ್ವೆ ಗೇಟ್‌ ರಸ್ತೆಗೆ ದುರಸ್ತಿ ಭಾಗ್ಯ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 14:09 IST
Last Updated 2 ಜೂನ್ 2020, 14:09 IST
ದಾವಣಗೆರೆಯ ಅಶೋಕ ರೈಲ್ವೆ ಗೇಟ್‌ ಬಳಿ ವಾಹನಗಳ ಸುಗಮ ಸಂಚಾರಕ್ಕಾಗಿ ಹಳಿಯ ಅಕ್ಕಪಕ್ಕ ಪೇವರ್ಸ್‌ಗಳನ್ನು ಹಾಕಿರುವುದು. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಅಶೋಕ ರೈಲ್ವೆ ಗೇಟ್‌ ಬಳಿ ವಾಹನಗಳ ಸುಗಮ ಸಂಚಾರಕ್ಕಾಗಿ ಹಳಿಯ ಅಕ್ಕಪಕ್ಕ ಪೇವರ್ಸ್‌ಗಳನ್ನು ಹಾಕಿರುವುದು. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ನಗರದ ಅಶೋಕ ರೈಲ್ವೆ ಗೇಟ್‌ ಬಳಿ ಹಳಿಗಳ ಅಕ್ಕ–ಪಕ್ಕದಲ್ಲಿ ಪೇವರ್ಸ್‌ ಹಾಕುವ ಮೂಲಕ ರೈಲ್ವೆ ಇಲಾಖೆಯು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದೆ. ಇನ್ನೊಂದೆಡೆ ಸ್ಮಾರ್ಟ್‌ ಸಿಟಿ ಯೋಜನೆಯಡಿ ಮಂಡಿಪೇಟೆಯ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಅಶೋಕ ರೈಲ್ವೆ ಗೇಟ್‌ವರೆಗೂ ವಿಸ್ತರಿಸಿ, ಕಾಂಕ್ರೀಟ್‌ ಹಾಕುವ ಕಾರ್ಯ ಭರದಿಂದ ಸಾಗುತ್ತಿದೆ.

ಅಶೋಕ ರೈಲ್ವೆ ಗೇಟ್‌ನಲ್ಲಿ ಹಳಿಯನ್ನು ದಾಟುವ ರಸ್ತೆ ಕಿತ್ತು ಹೋಗಿ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿತ್ತು. ಇಕ್ಕಟ್ಟಾದ ಈ ರಸ್ತೆಯಲ್ಲಿ ವಿಶೇಷವಾಗಿ ದ್ವಿಚಕ್ರ ವಾಹನಗಳ ಸವಾರರು ಹೋಗವಾಗ ಸರ್ಕಸ್‌ ಮಾಡಬೇಕಾಗುತ್ತಿತ್ತು. ನಾಗರಿಕರು ಪಡುತ್ತಿದ್ದ ಪಡಿಪಾಟಲನ್ನು ಮನಗಂಡ ರೈಲ್ವೆ ಇಲಾಖೆಯು, ಹಳಿಯ ಅಕ್ಕ ಪಕ್ಕ ಪೇವರ್ಸ್‌ ಹಾಕುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

‘ಮಂಡಿಪೇಟೆ ರಸ್ತೆಯಿಂದ ರೈಲ್ವೆ ಗೇಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಹಾಳಾಗಿತ್ತು. ಮಂಡಿಪೇಟೆ ರಸ್ತೆ ಅಭಿವೃದ್ಧಿ ಪಡಿಸುತ್ತಿದ್ದಾಗ ನಾಗರಿಕರು ರೈಲ್ವೆ ಗೇಟ್‌ವರೆಗೂ ರಸ್ತೆಯನ್ನು ದುರಸ್ತಿ ಮಾಡುವಂತೆ ಕೋರಿದ್ದರು. ಹೀಗಾಗಿ ಸ್ಮಾರ್ಟ್‌ ಸಿಟಿಯಡಿ ಮಂಡಿಪೇಟೆ ರಸ್ತೆಯಿಂದ ರೈಲ್ವೆ ಹಳಿವರೆಗೆ ಕಾಂಕ್ರೀಟ್‌ ಹಾಕಿ ರಸ್ತೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ’ ಎಂದು ಸ್ಮಾರ್ಟ್‌ ಸಿಟಿ ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ.ಎಂ. ಗುರುಪಾದಯ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ಗಾಂಧಿ ಸರ್ಕಲ್‌ನಿಂದ ಅಶೋಕ ರೈಲ್ವೆ ಗೇಟ್‌ವರೆಗಿನ ರಸ್ತೆಯೂ ಹಾಳಾಗಿದೆ. ಮಳೆ ಬಂದಾಗ ನೀರು ನಿಲ್ಲುತ್ತಿದೆ. ಗುಂಡಿ ಬಿದ್ದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಈ ರಸ್ತೆಯನ್ನೂ ದುರಸ್ತಿಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.