ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಕತ್ತಿಗೆಯಲ್ಲಿರುವ ಚಿಕ್ಕಮ್ಮನ ಮನೆಗೆ ಬೆಂಗಳೂರಿನ ಬೈಯಪ್ಪನಹಳ್ಳಿಯಿಂದಬುಧವಾರ ಬಂದಿದ್ದ ದಂಪತಿಯನ್ನು ಗ್ರಾಮಸ್ಥರು ಕೊರೊನಾ ವೈರಸ್ ಭೀತಿಯಿಂದಾಗಿ ಊರಿನಿಂದ ಹೊರಗೆ ಕಳುಹಿಸಿದ ಪ್ರಸಂಗ ನಡೆದಿದೆ.
ಈಚೆಗೆ ಹೆರಿಗೆಯಾದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವ್ಯಕ್ತಿಯೊಬ್ಬರು ಕತ್ತಿಗೆ ಗ್ರಾಮಕ್ಕೆ ಬಂದಿದ್ದರು. ‘ಬೆಂಗಳೂರಿನಿಂದ ನೀವು ಬಂದಿದ್ದೀರಿ. ನಿಮ್ಮಿಂದ ಗ್ರಾಮದಲ್ಲೂ ಕೊರೊನಾ ಹರಡುವ ಸಾಧ್ಯತೆ ಇದೆ. ಹೀಗಾಗಿ ಊರಿನಲ್ಲಿ ಇರುವುದು ಬೇಡ’ ಎಂದು ಜನ ಆಕ್ಷೇಪಿಸಿದ್ದಾರೆ. ಆ ವ್ಯಕ್ತಿ, ಆತನ ಪತ್ನಿ ಹಾಗೂ ಮಗುವಿನ ಕೈ ಮೇಲೆ ಮುದ್ರೆ ಹಾಕಿಸಿ ಊರಿನಿಂದ ಹೊರಗೆ ಕಳುಹಿಸಿದ್ದಾರೆ.
ಬಳಿಕ ಆ ಪತ್ನಿ, ಮಗುವಿನೊಂದಿಗೆ ಆ ವ್ಯಕ್ತಿಯು ದಾವಣಗೆರೆಯ ನಿಟುವಳ್ಳಿಯಲ್ಲಿರುವ ತಮ್ಮ ಮನೆಗೆ ಬಂದಿದ್ದಾರೆ. ಈ ವಿಷಯ ತಿಳಿದು ಗುರುವಾರ ರಾತ್ರಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ದಂಪತಿಗೆ ಧೈರ್ಯ ಹೇಳಿ ಬಂದಿದ್ದಾರೆ.
‘ದಂಪತಿ ಆರೋಗ್ಯವಾಗಿದ್ದಾರೆ. ಕತ್ತಿಗೆಯ ಘಟನೆ ಸ್ಮರಿಸಿಕೊಂಡು, ಆತ್ಮಹತ್ಯೆ ಮಾಡಿಕೊಳ್ಳಬೇಕು ಎನಿಸುತ್ತಿದೆ ಎಂದು ಸಂಕಟ ತೋಡಿಕೊಂಡರು. ನಿಮ್ಮ ಆರೋಗ್ಯ ತಪಾಸಣೆ ನಡೆಸುತ್ತೇವೆ. ಪ್ರತ್ಯೇಕವಾಗಿ ಕ್ವಾರಂಟೈನ್ನಲ್ಲಿ ಇರಿಸುತ್ತೇವೆ. ಬಳಿಕ ರೋಗ ಇಲ್ಲ ಎಂಬ ಪ್ರಮಾಣಪತ್ರವನ್ನು ತೆಗೆದುಕೊಂಡು ಹೋಗುವಿರಂತೆ ಎಂದು ಧೈರ್ಯ ಹೇಳಿ ಬಂದಿದ್ದೇವೆ’ ಎಂದು ಜಿಲ್ಲಾಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇಂಥ ಮಾನಸಿಕ ಕಾಯಿಲೆಯಿಂದ ಜನ ಹೊರಗೆ ಬರಬೇಕು. ನಿಟುವಳ್ಳಿಯಲ್ಲಿರುವ ಸ್ಥಳೀಯರಿಗೂ ಆತ ಆರೋಗ್ಯವಾಗಿದ್ದಾನೆ ಎಂದು ತಿಳಿಹೇಳಿ ಬಂದಿದ್ದೇವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.