ADVERTISEMENT

ವಾತಾವರಣದ ಏರುಪೇರು; ಮಕ್ಕಳ ವಾರ್ಡ್‌ನಲ್ಲಿ ಬೆಡ್‌ಗಳು ಫುಲ್

ಮಕ್ಕಳಲ್ಲಿ ಹೆಚ್ಚಿದ ನೆಗಡಿ, ಕೆಮ್ಮು, ಶೀತ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 5:27 IST
Last Updated 7 ಸೆಪ್ಟೆಂಬರ್ 2021, 5:27 IST
ಡಾ.ಲೋಹಿತ್
ಡಾ.ಲೋಹಿತ್   

ದಾವಣಗೆರೆ: ವಾತಾವರಣದ ಏರುಪೇರಿನಿಂದಾಗಿ ಮಕ್ಕಳಲ್ಲಿ ಶೀತ, ನೆಗಡಿ, ಕೆಮ್ಮು ಕಾಣಿಸಿಕೊಳ್ಳುತ್ತಿದ್ದು, ಚಿಗಟೇರಿ ಆಸ್ಪತ್ರೆಯ ಮಕ್ಕಳ ವಾರ್ಡ್‌ಗಳು ಫುಲ್ ಆಗಿದೆ. ಆದರೆ ಕೋವಿಡ್ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದೇ ಇರುವುದು ಸಮಾಧಾನ ಸಂಗತಿ.

ಕೋವಿಡ್ ಮೂರನೇ ಅಲೆ ಭವಿಷ್ಯ ನುಡಿಯುತ್ತಿರುವ ಈ ಹೊತ್ತಿನಲ್ಲೇ ವೈರಲ್ ಜ್ವರದ ಲಕ್ಷಣಗಳು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ವರ್ಷ ಮಕ್ಕಳು ಮನೆಯಲ್ಲಿ ಇದ್ದುದರಿಂದ ಅಷ್ಟಾಗಿ ಈ ಲಕ್ಷಣಗಳು ಕಾಣಿಸಿಕೊಳ್ಳಲಿಲ್ಲ. ಆದರೆ ಈ ವರ್ಷ ಮಕ್ಕಳು ಮನೆಯಿಂದ ಹೊರಗಡೆ ಬಂದಿದ್ದರಿಂದಆಗಸ್ಟ್–ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.

‘ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಾರ್ಡ್‌ನಲ್ಲಿ ಒಟ್ಟು 59 ಬೆಡ್‌ಗಳು ಇದ್ದು, ಅವುಗಳಲ್ಲಿ 40 ನಾನ್‌ ಕೋವಿಡ್ ಬೆಡ್‌ಗಳು ಇವೆ.

ADVERTISEMENT

‘ಆಸ್ಪತ್ರೆಗೆ ದಾಖಲಾದ ಪ್ರತಿ ಮಕ್ಕಳಿಗೂ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, ಸೋಮವಾರದವರೆಗೆ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 17 ವರ್ಷದ ಒಬ್ಬಳು ಹುಡುಗಿಯನ್ನು ಪ್ರೆಸ್ಸರ್ ಸಪೋರ್ಟ್ ಕೊಟ್ಟು ಐಸಿಯುನಲ್ಲಿ ಇಡಲಾಗಿದೆ. ಬೇರೆಯವರಿಗೆ ಹರಡದಂತೆ ಎಚ್ಚರ ವಹಿಸಲು ರೋಗ ಲಕ್ಷಣಗಳು ಇರುವ 15 ಮಕ್ಕಳನ್ನು ಐಸೊಲೇಷನ್‌ನಲ್ಲಿ ಇರಿಸಲಾಗಿದೆ’ ಎಂದು ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞರು.

‘ಕೊರೊನಾ ದೃಢಪಟ್ಟಿರುವ ಎಲ್ಲಾ ಮಕ್ಕಳಿಗೂ ಸಾಮಾನ್ಯ ಶೀತ, ನೆಗಡಿ, ಕೆಮ್ಮು ಲಕ್ಷಣಗಳು ಶಾಲೆಗೆ ಹೋಗಲು ಪರೀಕ್ಷೆಗೆ ಒಳಗಾದಾಗ ಕೋವಿಡ್ ಪಾಸಿಟಿವ್ ಬಂದಿವೆ. ಪಾಸಿಟಿವ್ ಬಂದ ಮಕ್ಕಳಿಗೆ ಪಾಸಿಟಿವ್ ಬಂದ ಮಕ್ಕಳನ್ನು ಐಸೊಲೇಟ್‌ ಮಾಡಿ ಅವರಿಗೆ ವಿಟಮಿನ್ ‘ಸಿ’ ಮಾತ್ರೆಗಳನ್ನು ನೀಡಲಾಗಿದೆಯೇ ಹೊರತು ಬೇರೆ ಚಿಕಿತ್ಸೆ ನೀಡಿಲ್ಲ’ ಎನ್ನುತ್ತಾರೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಲೋಹಿತ್.

‘ವಾತಾವರಣ ಬದಲಾವಣೆಯಾದಂತೆ ಮಕ್ಕಳಿಗೆ ಶೀತ, ನೆಗಡಿ, ಕೆಮ್ಮು ಕಾಣಿಸಿಕೊಳ್ಳುತ್ತಿದ್ದು, ದಾಖಲಾಗುವ ಮಕ್ಕಳ ಸಂಖ್ಯೆ ಜಾಸ್ತಿಯಾಗಿದೆ. ಆದರೆ ಕೆಲವೇ ಮಕ್ಕಳಿಗೆ ಮಾತ್ರ ಕೋವಿಡ್ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. 3ನೇ ಅಲೆ ಎದುರಿಸಲು ಸಜ್ಜಾಗಿದ್ದೇವೆ’ ಎನ್ನುತ್ತಾರೆ ಮಕ್ಕಳ ತಜ್ಞ ಡಾ.ಸುರೇಶ್.

ಮಕ್ಕಳ ಸೋಕಿನ ಪ್ರಮಾಣ

ಮೊದಲ ಅಲೆ;1875

ಎರಡನೇ ಅಲೆ;2668 ಮಕ್ಕಳು

ಸಾವು; 5 ವರ್ಷದ ಮಗು (ಕೋವಿಡ್ ಜೊತೆ ಹೃದಯ ಸಂಬಂಧಿ ಕಾಯಿಲೆ)

==

ಕೋವಿಡ್ ಮೂರನೇ ಅಲೆ ಬಂದರೆ ಎದುರಿಸಲು ಸಜ್ಜಾಗಿದ್ದೇವೆ. ಪರೀಕ್ಷೆಗೆ ಒಳಪಟ್ಟ ಹೆಚ್ಚಿನ ಮಕ್ಕಳಲ್ಲಿ ಕೆಲವೇ ಮಕ್ಕಳಲ್ಲಿ ಕೋವಿಡ್ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ವ್ಯಾಕ್ಸಿನ್ ಶಿಫಾರಸು ಮಾಡಿದರೆ ಕೊರೊನಾ ಕಡಿಮೆಯಾಗುತ್ತದೆ.

- ಡಾ.ಲೋಹಿತ್, ಮಕ್ಕಳ ತಜ್ಞ, ಚಿಗಟೇರಿ ಆಸ್ಪತ್ರೆ

----

ಮಕ್ಕಳಿಗೆ ನೆಗಡಿ ಕೆಮ್ಮು ಬಂದರೆ ಮನೆಯಲ್ಲೇ ಸಿರಪ್, ಮಾತ್ರೆಗಳನ್ನು ನೀಡದೇ ಆಸ್ಪತ್ರೆಗೆ ಬಂದು ಪರೀಕ್ಷೆಗೆ ಒಳಗಾಗಬೇಕು. ಬೇಗ ಪರೀಕ್ಷೆ ಮಾಡಿಸಿಕೊಂಡರೆ ಶೀಘ್ರ ಗುಣಪಡಿಸಬಹುದು.

-ಡಾ.ಸುರೇಶ್, ಮಕ್ಕಳ ತಜ್ಞ

----

ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಮಕ್ಕಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ ಜಿಲ್ಲಾ ಸರ್ವೇಕ್ಷಣಾಧಿಕಾರಿ, ಇಲ್ಲವೇ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನೀಡಬೇಕು. ಇದನ್ನು ಪರೀಕ್ಷಿಸಲು 4 ಮಂದಿ ತಾಂತ್ರಿಕ ತಜ್ಞರನ್ನೊಳಗೊಂಡ ಸಮಿತಿ ರಚಿಸಲಾಗಿದೆ.

- ಡಾ.ಜಿ.ಡಿ. ರಾಘವನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.