ಹಿರಿಯೂರು: ಹನ್ನೊಂದು ವರ್ಷದ ಹಿಂದೆ ಪ್ರಾರಂಭಗೊಂಡಿರುವ ಇಲ್ಲಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತನ್ನ ಸೇವಾ ಕಾರ್ಯಗಳಿಗಾಗಿ ಒಂಬತ್ತು ಬಾರಿ ‘ಅತ್ಯುತ್ತಮ ಶಾಖೆ’ ಪ್ರಶಸ್ತಿ ಪಡೆದಿದೆ.
ಬೆಂಗಳೂರಿನ ರಾಜಭವನದಲ್ಲಿ ಮಂಗಳವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯಪಾಲರು ಹಾಗೂ ಕರ್ನಾಟಕ ರಾಜ್ಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾಗಿರುವ ಥಾವರ್ಚಂದ್ ಗೆಹಲೋತ್ ಅವರಿಂದ ರೆಡ್ ಕ್ರಾಸ್ ಸಂಸ್ಥೆ ಪದಾಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿದರು.
‘ಹಿರಿಯೂರು ರೆಡ್ಕ್ರಾಸ್ ಸಂಸ್ಥೆ ಕೋವಿಡ್ ಸಮಯದಲ್ಲಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಕೊರೊನಾ ಸೋಂಕಿತರಿಗೆ ಸಹಾಯಹಸ್ತ ಚಾಚಿದ್ದು, ಕೊರೊನಾ ಜಾಗೃತಿ ಸಭೆಗಳನ್ನು ಆಯೋಜಿಸಿದ್ದು ಸೇರಿ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಹನ್ನೊಂದು ವರ್ಷಗಳಲ್ಲಿ ಒಂಬತ್ತು ಬಾರಿ ‘ಅತ್ಯುತ್ತಮ ಶಾಖೆ’ ಪ್ರಶಸ್ತಿ, ಒಮ್ಮೆ ತನಗೆ ವೈಯಕ್ತಿಕ ಪ್ರಶಸ್ತಿ ದೊರೆತಿದ್ದು, ಒಟ್ಟಾರೆ ಹತ್ತು ಪ್ರಶಸ್ತಿಗಳನ್ನು ನಮ್ಮ ಸಂಸ್ಥೆ ಮುಡಿಗೇರಿಸಿಕೊಂಡಿದೆ’ ಎಂದು ಸಂಸ್ಥೆಯ ಚೇರ್ಮನ್ ಎಚ್.ಎಸ್. ಸುಂದರ್ರಾಜ್ ಸುದ್ದಿಗಾರರಿಗೆ ತಿಳಿಸಿದರು.
‘ರೋಟರಿ, ಆರೋಗ್ಯ ಇಲಾಖೆ, ನಗರದ ಇತರೆ ಸ್ವಯಂ ಸೇವಾಸಂಸ್ಥೆಗಳು ನಮ್ಮ ಜೊತೆ ಕೈಜೋಡಿಸಿದ್ದರಿಂದ ಈ ಪ್ರಶಸ್ತಿ ದೊರೆತಿದೆ’ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ರಾಜ್ಯ ಶಾಖೆಯ ಚೇರ್ಮನ್ ನಾಗಣ್ಣ, ಹಿರಿಯೂರು ಶಾಖೆಯ ವೈಸ್ ಚೇರ್ಮನ್ ಎ. ರಾಘವೇಂದ್ರ, ಕಾರ್ಯದರ್ಶಿ ಎಂ. ಎಸ್. ರಾಘವೇಂದ್ರ, ಖಜಾಂಚಿ ಸಣ್ಣ ಭೀಮಣ್ಣ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.