ದಾವಣಗೆರೆ: ಕೊರೊನಾದಿಂದ ಮೃತಪಡುತ್ತಿರುವವರ ಸಂಖ್ಯೆಯನ್ನು ಜಿಲ್ಲಾಡಳಿತ ಮುಚ್ಚಿಡುತ್ತಿದೆ. ಜತೆಗೆ ಸೋಂಕಿತರ ಸಂಖ್ಯೆಯನ್ನು ಕೂಡ ಸರಿಯಾಗಿ ನೀಡುತ್ತಿಲ್ಲ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಆರೋಪಿಸಿದ್ದಾರೆ.
ಹರಿಹರದಲ್ಲಿ ಒಂದೇ ದಿನ ಐವರು ಸೋಂಕಿನಿಂದ ಮೃತಪಟ್ಟಿದ್ದರು. ಅದರಲ್ಲಿ ಒಂದನ್ನಷ್ಟೇ ಜಿಲ್ಲಾಡಳಿತ ನೀಡುವ ಅಂಕಿ ಅಂಶದಲ್ಲಿ ನೀಡಲಾಗಿದೆ. ಇಂಥ ಹಲವು ಪ್ರಕರಣಗಳನ್ನು ಮುಚ್ಚಿ ಹಾಕಲಾಗಿದೆ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಲಸಿಕೆ ಸರಿಯಾಗಿ ಪೂರೈಸಲು ಸರ್ಕಾರಗಳಿಗೆ ಆಗಿಲ್ಲ. 45 ವರ್ಷದ ಮೇಲಿನ ಎಲ್ಲರಿಗೆ ಡೋಸ್ ನೀಡಲು ಇನ್ನೂ ಸಾಧ್ಯವಾಗಿಲ್ಲ. ಇದರ ನಡುವೆ 18 ವರ್ಷ ದಾಟಿದವರಿಗೆ ನೀಡುವುದಾಗಿ ಘೋಷಿಸಿದೆ. ಮಂಗಳವಾರ ಇದರಿಂದಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಕೆಲವು ದಿನ ಮುಂದೂಡಿ ಲಸಿಕೆ ಸರಿಯಾಗಿ ದೊರೆಯ ತೊಡಗಿದ್ದಲ್ಲಿಂದ 18 ವರ್ಷ ದಾಟಿದವರಿಗೆ ನೀಡಬಹುದಿತ್ತು. ಗೊಂದಲ ಸೃಷ್ಟಿಸಲು ಘೋಷಣೆ ಮಾಡಿದಂತಿದೆ ಎಂದರು.
ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಬೆಡ್ಗಳು ಸಿಗುತ್ತಿಲ್ಲ. ಬಹಳ ಮಂದಿಗೆ ತೊಂದರೆಯಾಗಿದೆ. ಕೊರೊನಾ ಸೋಂಕು ಕಡಿಮೆ ಮಾಡಲು ಜಿಲ್ಲಾ ಆಡಳಿತದಿಂದ ಸಾಧ್ಯವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಬಂದು ಹೋಗುತ್ತಾರೆ. ಹಾಸಿಗೆ ಹೆಚ್ಚಿಸುವ ಕೆಲಸ ಮಾಡುತ್ತಿಲ್ಲ. ಅವರಿಗೆ ಬೇಕಾದ ಬೇರೆ ಕೆಲಸಗಳಿಗಾಗಿ ಮಾತ್ರ ಬಂದು ಹೋಗುತ್ತಿದ್ದಾರೆ ಎಂದು ಟೀಕಿಸಿದರು.
ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಚಮನ್ಸಾಬ್, ಕಾಂಗ್ರೆಸ್ ಮುಖಂಡ ಹುಲ್ಲುಮನಿ ಗಣೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.