ಹರಿಹರ: ಈ ಬಾರಿಯ ವಿಧಾನಸಭೆಯ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತರಾದ ಇಲ್ಲಿನ ಶಾಸಕ ಎಸ್. ರಾಮಪ್ಪರ ಮನೆಗೆ ಶನಿವಾರ ಭೇಟಿ ನೀಡಿದ್ದ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ ವಿಧಾನ ಪರಿಷತ್ ಸದಸ್ಯರಾಗಿ ನೇಮಿಸುುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಜಿಲ್ಲಾ ಅದ್ಯಕ್ಷ ಎಚ್.ಬಿ. ಮಂಜಪ್ಪ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಅವರೊಂದಿಗೆ ಶುಕ್ರವಾರ ರಾತ್ರಿ ರಾಮಪ್ಪ ಅವರ ಮನೆಗೆ ಭೇಟಿ ನೀಡಿದ್ದ ಮಯೂರ ಜಯಕುಮಾರ್, ‘ರಾಜ್ಯದಲ್ಲಿ ಉತ್ತಮ ವಾತಾವರಣವಿದ್ದು, ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ. ಆಗ ತಮ್ಮನ್ನು ಎಂಎಲ್ಸಿಯಾಗಿ ನೇಮಿಸಲಾಗುವುದು’ ಎಂದು ಭರವಸೆ ನೀಡಿ ಸಮಾಧಾನಪಡಿಸಿದರು ಎನ್ನಲಾಗಿದೆ.
‘ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಎರಡು ಬಾರಿ ‘ಬಿ’ ಫಾರಂ ನೀಡಿದೆ. ಈ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ಆಪರೇಷನ್ ಕಮಲದ ಅವಧಿಯಲ್ಲಿ ನನಗೂ ಆಹ್ವಾನ ಬಂದಿತ್ತು. ಆದರೆ, ನಾನು ಪಕ್ಷಕ್ಕೆ ದ್ರೋಹ ಬಗೆಯಬಾರದು ಎಂದು ಆಹ್ವಾನ ತಿರಸ್ಕರಿಸಿದೆ. ಆದರೂ ನನಗೆ ಟಿಕೆಟ್ ಕೊಡದಿರುವುದು ತೀವ್ರ ಬೇಸರ ತರಿಸಿದೆ’ ಎಂದು ರಾಮಪ್ಪ ಅನಿಸಿಕೆ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
‘ಪಕ್ಷದ ತೀರ್ಮಾನಕ್ಕೆ ನಾವೆಲ್ಲರೂ ಗೌರವ ನೀಡಬೇಕು. ನಿಮಗೆ ಉತ್ತಮ ಅವಕಾಶಗಳನ್ನು ಪಕ್ಷ ನೀಡಲಿದೆ. ಬೇಸರವನ್ನು ಪಕ್ಕಕ್ಕಿಟ್ಟು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿರಿ’ ಎಂದು ರಾಮಪ್ಪ ಅವರಿಗೆ ಮುಖಂಡರು ಕೋರಿಕೊಂಡರು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.