ದಾವಣಗೆರೆ: ಈ ಬಾರಿ ಮಹಾನಗರ ಪಾಲಿಕೆ ಅಧಿಕಾರವನ್ನು ಕಾಂಗ್ರೆಸ್ ಹಿಡಿಯಲಿದೆ ಎಂದು ಮಹಾ ನಗರಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಒಟ್ಟು 45 ಸದಸ್ಯ ಬಲದಲ್ಲಿ 22 ಸ್ಥಾನಗಳು ಕಾಂಗ್ರೆಸ್ಗೆ ಬಂದಿದ್ದು, 45ನೇ ವಾರ್ಡ್ನ ಬಂಡಾಯ ಅಭ್ಯರ್ಥಿ ಉದಯ್ಕುಮಾರ್ ಕಾಂಗ್ರೆಸ್ನವರೇ. ಚುನಾವಣಾ ಸಮಯದಲ್ಲಿ ಟಿಕೆಟ್ ಹಂಚಿಕೆಯಲ್ಲಿನ ಗೊಂದಲದಿಂದಾಗಿ ಹೊರಬಂದಿದ್ದರು. ಈಗ ಅವರು ಕಾಂಗ್ರೆಸ್ಗೆ ಬೆಂಬಲ ಸೂಚಿಸುವ ಸಾಧ್ಯತೆಗಳಿವೆ. ಜಾತ್ಯತೀತ ಮನೋಭಾವ ಇರುವ ಜೆಡಿಎಸ್ ಒಂದು ಸ್ಥಾನ ಗೆದ್ದಿದ್ದು, ಆ ಅಭ್ಯರ್ಥಿ ಬೆಂಬಲ ಸೂಚಿಸಿದರೆ 24 ಸ್ಥಾನಗಳಾಗುತ್ತವೆ’ ಎಂದರು.
‘ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಮತದಾನದ ಹಕ್ಕು ಇರುವುದರಿಂದ ಒಟ್ಟು 26 ಸ್ಥಾನಗಳು ಆಗಲಿವೆ. ಹಾಗಾಗಿ ನಿಚ್ಚಳ ಬಹುಮತ ಸಿಗಲಿದ್ದು, ನಗರಪಾಲಿಕೆ ಆಡಳಿತವನ್ನು ಮತ್ತೊಮ್ಮೆ ಹಿಡಿಯಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಬಿಜೆಪಿ ಶಾಸಕರು ಹಾಗೂ ಸಂಸದರು ಕಾಂಗ್ರೆಸ್ ನಿರ್ನಾಮವಾಗುತ್ತದೆ ಎಂದು ಹೇಳಿದ್ದರು. ಸರ್ಕಾರ ಬಿಜೆಪಿಯದ್ದೇ ಇದ್ದರೂ ಸ್ಥಳೀಯವಾಗಿ ನಾವು ಹೆಚ್ಚು ಸ್ಥಾನ ಗೆದ್ದಿರುವುದು ಹೆಮ್ಮೆ. ನಗರದ ಜನತೆಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ₹ 530 ಕೋಟಿ ಅನುದಾನ ತಂದು ‘ಜಲಶ್ರೀ’ ಯೋಜನೆ ಮುಂದಿದ್ದು, ಶೀಘ್ರ ಅನುಷ್ಠಾನಗೊಳಿಸುವ ಕೆಲಸ ಮಾಡುತ್ತೇವೆ. ಸ್ಮಾರ್ಟ್ ಸಿಟಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಮಳೆ ಬಂದಾಗ ಹಳ್ಳದ ಪ್ರದೇಶಗಳಿಗೆ ನೀರು ಹಾನಿಯಾಗದಂತೆ ತಡೆಗಟ್ಟಲು ಅಭಿವೃದ್ಧಿ ಕೆಲಸ ಮಾಡಲು ಚಿಂತನೆ ನಡೆಸುತ್ತೇವೆ’ ಎಂದರು.
‘ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ದಾವಣಗೆರೆಗೆ ಹಾಕಿದ ಭದ್ರ ಬುನಾದಿ, ಶಾಶ್ವತ ಕಾಮಗಾರಿಗಳಿಗೆ ಜನ ಮನ್ನಣೆ ಕೊಟ್ಟಿದ್ದಾರೆ. ಉತ್ತಮ ಆಡಳಿತವನ್ನು ನೀಡುವ ಮೂಲಕ ಅವರು ಕೊಟ್ಟಿರುವ ಜವಾಬ್ದಾರಿಯನ್ನು ನಿಭಾಯಿಸಿ ಮುಂದಿನ ಅವಧಿಗೂ ಆಯ್ಕೆಯಾಗುವಂತೆ ಕೆಲಸ ಮಾಡುತ್ತೇವೆ’ ಎಂದರು.
ದಾವಣಗೆರೆ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಅಯೂಬ್ ಪೈಲ್ವಾನ್ ಮಾತನಾಡಿ, ‘30ರಿಂದ 35 ಸ್ಥಾನ ಬರುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಬಿಜೆಪಿಯವರು ಹಣ, ಹೆಂಡದ ಹೊಳೆ ಹರಿಸಿದ್ದರಿಂದ ಕಾಂಗ್ರೆಸ್ಗೆ ಕಡಿಮೆ ಸ್ಥಾನಗಳು ಬಂದವು. ಕುಡಿಯುವ ನೀರು, ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.