ADVERTISEMENT

ಸಹಕಾರ ಸಂಸ್ಥೆಯಲ್ಲಿ ಪಾರದರ್ಶಕತೆ ಅಗತ್ಯ: ಡಾ.ಪ್ರಭಾ ಮಲ್ಲಿಕಾರ್ಜುನ್‌ ಅಭಿಮತ

ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 6:52 IST
Last Updated 15 ನವೆಂಬರ್ 2025, 6:52 IST
ದಾವಣಗೆರೆಯ ಸದ್ಯೋಜಾತ ಮಠದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಹಕಾರ ಸಪ್ತಾಹವನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಸದ್ಯೋಜಾತ ಮಠದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಹಕಾರ ಸಪ್ತಾಹವನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಸಹಕಾರ ಸಂಸ್ಥೆಗಳಲ್ಲಿ ನಡೆಯುವ ಆರ್ಥಿಕ ವಹಿವಾಟು ಇನ್ನಷ್ಟು ಪಾರದರ್ಶಕವಾಗಬೇಕು. ಯುವಸಮೂಹ, ರೈತರು ಹಾಗೂ ಮಹಿಳೆಯರ ಆರ್ಥಿಕ ಅಗತ್ಯಗಳಿಗೆ ಸ್ಪಂದಿಸಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಸಲಹೆ ನೀಡಿದರು.

ಇಲ್ಲಿನ ಸದ್ಯೋಜಾತ ಮಠದಲ್ಲಿ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ 72ನೇ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶದ ಬಹುತೇಕ ಹಳ್ಳಿಗಳಲ್ಲಿ ಸಹಕಾರ ಸಂಸ್ಥೆಗಳಿವೆ. ಈ ವ್ಯವಸ್ಥೆ ರೈತರಿಗೆ ಸೀಮಿತವಾಗದೇ ಮಹಿಳೆಯರು ಮತ್ತು ಯುವ ಸಮೂಹವನ್ನು ಒಳಗೊಳ್ಳಬೇಕು. ತಿಂಗಳಿಗೊಮ್ಮೆ ಸಭೆ ನಡೆಸಿ ತೀರ್ಮಾನಗಳನ್ನು ಕೈಗೊಳ್ಳಬೇಕು. ಸ್ಟಾರ್ಟ್‌ಅಪ್‌ಗಳಿಗೂ ಸಹಾಯಹಸ್ತ ಚಾಚಬೇಕು’ ಎಂದರು.

ADVERTISEMENT

‘ರಾಜ್ಯದ ಗದಗದಲ್ಲಿ ಸಹಕಾರಿ ವ್ಯವಸ್ಥೆಯ ಬೀಜ ಮೊಳೆಯಿತು. ಈಗ ಇದು ದೇಶದ ಎಲ್ಲೆಡೆ ಹೆಮ್ಮರವಾಗಿ ಬೆಳೆದಿದೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿಯಡಿ ಸಹಕಾರ ಕ್ಷೇತ್ರಕ್ಕೆ ₹ 60 ಲಕ್ಷ ಅನುದಾನ ಹಂಚಿಕೆ ಮಾಡಲಾಗಿದೆ. ಸಹಕಾರ ಭವನದ ಕಟ್ಟಡಕ್ಕೆ ಕೂಡ ಅನುದಾನ ಒದಗಿಸಲಾಗುವುದು’ ಎಂದು ಆಶ್ವಾಸನೆ ನೀಡಿದರು.

‘ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಪಂಚವಾರ್ಷಿಕ ಯೋಜನೆಗಳಲ್ಲಿ ಸಹಕಾರ ಕ್ಷೇತ್ರವನ್ನು ‍ಪ್ರೋತ್ಸಾಹಿಸಿದರು. ಭಾರತದ ಆರ್ಥಿಕ ವ್ಯವಸ್ಥೆಯನ್ನು ಸಹಕಾರ ಕ್ಷೇತ್ರ ಭದ್ರಗೊಳಿಸಿತು. ಸಹಕಾರ ಕ್ಷೇತ್ರ ಎಲ್ಲ ರೀತಿಯಲ್ಲಿ ಬೆಳೆದಿದೆ. ಸಂಘದ ಎಲ್ಲ ದಾಖಲೆಗಳು ಡಿಜಿಟಲೀಕರಣಗೊಳ್ಳುತ್ತಿವೆ’ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಜೆ.ಆರ್. ಷಣ್ಮುಖಪ್ಪ ಹೇಳಿದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಆರ್.ಜಿ. ಶ್ರೀನಿವಾಸಮೂರ್ತಿ, ಸಹಕಾರ ಕ್ಷೇತ್ರದ ಮುಖಂಡರಾದ ಡಿ.ಕುಮಾರ್, ಜಗದೀಶಪ್ಪ ಬಣಕಾರ, ಎಚ್.ಬಿ. ಮಂಜುಳಾ, ಬಿ.ಶೇಖರಪ್ಪ, ಆವರಗೆರೆ ರುದ್ರಮುನಿ, ಜೆ.ಎಸ್. ವೇಣುಗೋಪಾಲರೆಡ್ಡಿ, ಜಿ.ಎಸ್. ಸಂತೋಷ್, ಎಚ್.ಆರ್. ಸಿದ್ದೇಶ್, ಕೆ.ಷಣ್ಮುಖಪ್ಪ, ಡಿ.ಎನ್. ಜಗದೀಶ್, ವೆಂಕಟೇಶ ನಾಯ್ಕ ಹಾಜರಿದ್ದರು.

ನಬಾರ್ಡ್‌ ನೆರವಿಗೆ ಕೋರಿಕೆ

ರಾಜ್ಯದ ಕೃಷಿ ಕ್ಷೇತ್ರಕ್ಕೆ ಸಾಲ ವಿತರಿಸಲು ನಬಾರ್ಡ್‌ನಿಂದ ₹ 10000 ಕೋಟಿ ನೆರವು ನೀಡುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಕೋರಿಕೊಳ್ಳಲಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಭರವಸೆ ನೀಡಿದರು. ‘ನಬಾರ್ಡ್‌ನಿಂದ ಕರ್ನಾಟಕಕ್ಕೆ ಬರುತ್ತಿದ್ದ ಆರ್ಥಿಕ ನೆರವು ಕಡಿತಗೊಂಡಿದೆ. ಈ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಸಂಸದರು ಹಣಕಾಸು ಸಚಿವರನ್ನು ಭೇಟಿ ಮಾಡಲಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.