ದಾವಣಗೆರೆ: ಜಿಲ್ಲೆಯಲ್ಲಿ 144 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಒಬ್ಬರು ಮೃತಪಟ್ಟಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 10 ಸಾವಿರ ದಾಟಿದೆ.
ಕುಂದವಾಡ ಕೆಎಚ್ಪಿ ಕಾಲೊನಿಯ 48 ವರ್ಷದ ಪುರುಷ ಮಧುಮೇಹ, ಅಧಿಕ ರಕ್ತದೊತ್ತಡ, ಉಸಿರಾಟದ ಸಮಸ್ಯೆಯಿಂದ ಮೃತಪಟ್ಟರು.
17 ವೃದ್ಧರು, 13 ವೃದ್ಧೆಯರು, 7 ಬಾಲಕಿಯರು, 4 ಬಾಲಕರಿಗೂ ಕೊರೊನಾ ಬಂದಿದೆ.
ಜಿಲ್ಲಾಧಿಕಾರಿ ವಾಹನದ ಚಾಲಕ, ಎಸ್ಎಸ್ ಆಸ್ಪತ್ರೆಯ ಮೂವರು, ಸಿ.ಜಿ. ಆಸ್ಪತ್ರೆ, ಬಾಪೂಜಿ ಆಸ್ಪತ್ರೆ, ಜೆಜೆಎಂಎಂಸಿಯ ತಲಾ ಒಬ್ಬರಿಗೆ ಸೋಂಕು ತಗುಲಿದೆ.
ದಾವಣಗೆರೆ ತಾಲ್ಲೂಕಿನ 46 ಮಂದಿಗೆ ಸೋಂಕು ಬಂದಿದೆ. ಹಳೇಬಿಸಲೇರಿ, ಜಂಪೇನಹಳ್ಳಿ, ದೊಗ್ಗಳ್ಳಿ, ಹಳೇಬಾತಿ ಹೀಗೆ ನಾಲ್ಕೈದು ಜನರನ್ನು ಹೊರತುಪಡಿಸಿದರೆ ಉಳಿದ ಎಲ್ಲರೂ ಮಹಾನಗರ ಪಾಲಿಕೆಯ ವ್ಯಾಪ್ತಿಯವರು.
ಹರಿಹರದಲ್ಲಿ 69 ಮಂದಿಗೆ ಸೋಂಕು ತಗುಲಿದೆ. ಚನ್ನಗಿರಿಯ 17, ಹೊನ್ನಾಳಿ–ನ್ಯಾಮತಿಯ 9, ಜಗಳೂರಿನ 2 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾವೇರಿ ಮತ್ತು ರಾಣೆಬೆನ್ನೂರಿನ ಇಬ್ಬರಿಗೆ ಕೊರೊನಾ ಬಂದಿದೆ.
ಸೋಂಕಿನಿಂದ ಗುಣಮುಖರಾಗಿ 322 ಮಂದಿ ಭಾನುವಾರ ಬಿಡುಗಡೆಗೊಂಡಿದ್ದಾರೆ. ಅದರಲ್ಲಿ 52 ವೃದ್ಧರು, 23 ವೃದ್ಧೆಯರು, ಏಳು ಬಾಲಕರು, ನಾಲ್ವರು ಬಾಲಕಿಯರು ಸೇರಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 12,897 ಮಂದಿಗೆ ಕೊರೊನಾ ಬಂದಿದೆ. ಅದರಲ್ಲಿ 10,293 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 226 ಮಂದಿ ಮೃತಪಟ್ಟಿದ್ದಾರೆ. 2378 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ ಏಳು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.