ದಾವಣಗೆರೆ: ಪತ್ನಿ ಹಾಗೂ ನಾದಿನಿಯ ಕೊಲೆ ಮಾಡಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು ₹ 20 ಸಾವಿರ ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಕೂಡ್ಲಿಗಿ ತಾಲ್ಲೂಕಿನ ಬೆನಕನಹಳ್ಳಿಯ ಡಿ. ಮಂಜುನಾಥ್ (27) ಶಿಕ್ಷೆಗೆ ಗುರಿಯಾದ ಅಪರಾಧಿ. ಪತ್ನಿ ಗೌರಮ್ಮ ಹಾಗೂ ನಾದಿನಿ ರಾಧಮ್ಮ ಅವರನ್ನು ಅಪರಾಧಿ 2021ರ ಜುಲೈ 29ರಂದು ಕೊಲೆ ಮಾಡಿದ್ದನು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ಎಚ್ ಅಣ್ಣಯ್ಯನವರ್ ಸೋಮವಾರ ಆದೇಶ ನೀಡಿದ್ದಾರೆ.
ಪತಿಯಿಂದ ದೂರವಾಗಿದ್ದ ಗೌರಮ್ಮ, ಸಹೋದರಿ ರಾಧಮ್ಮ ಅವರೊಂದಿಗೆ ಆಂಜನೇಯ ಕಾಟನ್ ಮಿಲ್ನಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿಯ ಶೀಲ ಶಂಕಿಸುತ್ತಿದ್ದ ಮಂಜುನಾಥ್, ಆಗಾಗ ದಾವಣಗೆರೆಯ ಮನೆಗೆ ಬಂದು ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದನು. ಈ ಗಲಾಟೆ ವಿಕೋಪಕ್ಕೆ ತಿರುಗಿ ಇಬ್ಬರನ್ನು ಕೊಲೆಗೈದು ತಲೆಮರೆಸಿಕೊಂಡಿದ್ದನು.
ಪ್ರಕರಣ ದಾಖಲಿಸಿಕೊಂಡಿದ್ದ ಸಿಪಿಐ ಎಚ್. ಗುರುಬಸವರಾಜ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ವಕೀಲ ಕೆ.ಎಸ್. ಸತೀಶ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.