ದಾವಣಗೆರೆ: ಓಮೈಕ್ರಾನ್, ಕೊರೊನಾ ಸೋಂಕುಗಳನ್ನು ನಿಯಂತ್ರಿಸಲು ಸರ್ಕಾರ ವಿಧಿಸಿರುವ ವಾರಾಂತ್ಯದ ಕರ್ಫ್ಯೂವಿನ ಎರಡನೇ ದಿನವೂ ಬಹುತೇಕ ವಹಿವಾಟುಗಳು ಸ್ತಬ್ಧಗೊಂಡವು.
ಶನಿವಾರಕ್ಕಿಂತಲೂ ಭಾನುವಾರ ಪ್ರಯಾಣಿಕರ ಸಂಖ್ಯೆ ಬಹಳ ಕಡಿಮೆ ಆಗಿದ್ದರಿಂದ ಸರ್ಕಾರಿ ಬಸ್ಸುಗಳ ಸಂಚಾರವೂ ವಿರಳವಾಯಿತು. ಎರಡು ದಿನಗಳಿಂದ ಸೋಂಕಿನ ಪ್ರಮಾಣವೂ ಹೆಚ್ಚಳವಾಗಿದ್ದರಿಂದ ಜನರು ಹೊರಗೆ ಬರುವುದನ್ನು ಕಡಿಮೆ ಮಾಡಿದ್ದರು.
ರೈಲ್ವೆ ನಿಲ್ದಾಣದಲ್ಲಿ ಕೂಡ ಪ್ರಯಾಣಿಕರು ಇಲ್ಲದೇ ಬಿಕೋ ಅನ್ನುತ್ತಿತ್ತು. ವಾರದ ಸಂತೆ ನಡೆಯುವ ಸ್ಥಳಗಳಲ್ಲಿ ಮಾತ್ರ ಭಾನುವಾರ ಬೆಳಿಗ್ಗೆ ಖರೀದಿಗೆ ಜನರು ಬಂದಿದ್ದರು. ಹೊತ್ತು ಏರುತ್ತಿದ್ದಂತೆ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಾ ಬಂದಿತ್ತು. ಗ್ರಾಮೀಣ ಪ್ರದೇಶದಿಂದ ಹಣ್ಣು, ಸೊಪ್ಪು, ತರಕಾರಿ, ಹೂವು ತಂಡ ರೈತರು, ವ್ಯಾಪಾರಸ್ಥರಿಗೆ ಗ್ರಾಹಕರು ಇಲ್ಲದಂತಾಯಿತು. ಸದಾ ಜನರಿಂದ ತುಂಬಿರುತ್ತಿದ್ದ ಇಲ್ಲಿನ ಗಡಿಯಾರ ಕಂಬ, ಕಾಯಿಪೇಟೆ, ಕೆಆರ್ ಮಾರುಕಟ್ಟೆ, ಹಳೆ ಹೆರಿಗೆ ಆಸ್ಪತ್ರೆ, ನಿಟುವಳ್ಳಿ ಭಾಗ, ಎಸ್ ನಿಜಲಿಂಗಪ್ಪ ಬಡಾವಣೆ ಗಡಿಯಾರ ವೃತ್ತ ಬಳಿ ಜನರು ಅಷ್ಟಾಗಿ ಕಂಡುಬರಲಿಲ್ಲ. ಕೋಳಿ, ಕುರಿ, ಮೀನು ಮಾಂಸದಂಗಡಿಗಳು, ಮೀನು ಮಾರಾಟದ ಅಂಗಡಿಗಳಲ್ಲಿ ಭಾನುವಾರದ ಬೇಡಿಕೆ ಕಂಡು ಬಂದಿತ್ತು.
ಪ್ರಮುಖ ಸರ್ಕಲ್ಗಳಲ್ಲಿ ಪೊಲೀಸರು ತಪಾಸಣೆ ನಡೆಸಿದರು. ಅನಗತ್ಯವಾಗಿ ಓಡಾಡುವವರಿಗೆ ಬುದ್ಧಿ ಹೇಳಿ ಕಳುಹಿಸಿದರು. ಮಾಸ್ಕ್ ಇಲ್ಲದವರಿಗೆ ದಂಡ ವಿಧಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.