ADVERTISEMENT

ಲಾಕ್‌ಡೌನ್‌ ನೆನಪಿಸಿದ ಕರ್ಫ್ಯೂ

ಕಸ ಒಯ್ಯುವ ವಾಹನಗಳಲ್ಲಿರುವ ಧ್ವನಿವರ್ಧಕಗಳ ಮೂಲಕ ಜಾಗೃತಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 16:32 IST
Last Updated 22 ಏಪ್ರಿಲ್ 2021, 16:32 IST
ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ಸರ್ಕಾರದ ಹೊಸ ನೀತಿಗಳ ಪಾಲನೆಗಾಗಿ ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನವನ್ನು ಬಂದ್ ಮಾಡಿರುವುದು–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ಸರ್ಕಾರದ ಹೊಸ ನೀತಿಗಳ ಪಾಲನೆಗಾಗಿ ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನವನ್ನು ಬಂದ್ ಮಾಡಿರುವುದು–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ರಾತ್ರಿ ಕರ್ಫ್ಯೂ ಎಂದು ಜನರು ಬುಧವಾರ ಕತ್ತಲಾಗುತ್ತಿದ್ದಂತೆ ಮನೆ ಸೇರಿದ್ದರು. ಗುರುವಾರ ಅಧಿಕಾರಿಗಳು, ಪೊಲೀಸರು ಬಂದು ವಿವಿಧ ಅಂಗಡಿಗಳನ್ನು ಬಾಗಿಲು ಹಾಕಿಸುವುದನ್ನು ಕಂಡು ಇದು ಲಾಕ್‌ಡೌನ್‌ ಇರಬೇಕು ಎಂದು ಜನ ಬೆಚ್ಚಿಬಿದ್ದರು.

ಕರ್ಫ್ಯೂ ರಾತ್ರಿ ಹೊತ್ತು ಇದ್ದರೂ ಹಗಲೂ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ಸರ್ಕಾರ ಮಾರ್ಗಸೂಚಿ ಹೊರಡಿಸಿರುವುದೇ ಜನರಿಗೆ ಈ ಅನುಭವ ಉಂಟಾಗಲು ಕಾರಣವಾಗಿದೆ.

ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳು ಮುಚ್ಚಿರಬೇಕು ಎಂಬ ಬಗ್ಗೆ ಮಾಹಿತಿ ಇಲ್ಲದೇ ಬಟ್ಟೆ ಅಂಗಡಿಗಳು, ಟೈಲರ್‌ ಅಂಗಡಿಗಳು ಗ್ಯಾರೇಜ್‌, ಶೋರೂಂಗಳನ್ನೆಲ್ಲ ತೆರೆದಿದ್ದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ಸಹಿತ ಅಧಿಕಾರಿಗಳು ಬೆಳಿಗ್ಗೆ ಕೆಲವು ಅಂಗಡಿಗಳನ್ನು ಮುಚ್ಚಿಸಿದರು. ತಹಶೀಲ್ದಾರ್‌ ಗಿರೀಶ್‌, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸಹಿತ ಕೆಲವು ಅಧಿಕಾರಿಗಳು ಹಳೇ ದಾವಣಗೆರೆ ಭಾಗದಲ್ಲಿ ಅಂಗಡಿಗಳನ್ನು ಮುಚ್ಚಿಸಿದರು.

ADVERTISEMENT

ಕಸ ಒಯ್ಯುವ ವಾಹನಗಳಲ್ಲಿರುವ ಧ್ವನಿವರ್ಧಕಗಳಲ್ಲಿ ಸರ್ಕಾರದ ನಿಯಮಗಳನ್ನು ತಿಳಿಸಿ ಜಾಗೃತಿ ಮೂಡಿಸಲಾಯಿತು. ಬೀದಿ ಬದಿ ಅಂಗಡಿಗಳಲ್ಲಿ ಚಯರ್‌ಗಳನ್ನು ಇಡದಂತೆ ಎಚ್ಚರಿಸಲಾಯಿತು. ಬೆಳಿಗ್ಗೆ ಬಾಗಿಲು ತೆರೆದ ಅನೇಕ ಅಂಗಡಿಗಳು ಮಧ್ಯಾಹ್ನ ಹೊತ್ತಿಗೆ ಬಾಗಿಲು ಹಾಕಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.