ದಾವಣಗೆರೆ: ಹಳೇ ದಾವಣಗೆರೆಯ ಮುಸ್ತಫಾ ನಗರದಲ್ಲಿ ಕೊರೊನಾ ನಿರೋಧಕ ಲಸಿಕೆಗೆ ಹೆದರಿ ಮನೆಗಳ ಬಾಗಿಲು ಹಾಕಿಕೊಂಡು ಒಳಗೆ ಕುಳಿತಿದ್ದರು. ಅವರನ್ನೂ ಬಿಡದೆ ಲಸಿಕೆ ಹಾಕಲಾಗಿದೆ. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನೇತೃತ್ವದಲ್ಲಿ ಲಸಿಕಾ ಅಭಿಯಾನ ನಡೆಸಿದ ತಂಡವು ಕದ ತಟ್ಟಿ, ಬಾಗಿಲು ತೆಗೆಸಿ ಲಸಿಕೆ ನೀಡಿದೆ.
ಆಜಾದ್ನಗರದಲ್ಲಿ ರಸ್ತೆಯಲ್ಲಿ ಓಡಾಡುತ್ತಿದ್ದ ಯುವಕರನ್ನು ನಿಲ್ಲಿಸಿ ಲಸಿಕೆ ಆಗಿದೆಯೇ ಎಂದು ವಿಚಾರಿಸಿದರು. ಹಾಕಿಸಿಕೊಳ್ಳದವರಿಗೆ ಅಲ್ಲೇ ಲಸಿಕೆ ನೀಡಲಾಯಿತು. ಆಮೇಲೆ ಆಧಾರ್ ಕಾರ್ಡ್ ತಂದು ಕೊಡಿ ಎಂದು ಅವರಿಗೆ ಸಲಹೆ ನೀಡಲಾಯಿತು.
‘ನನಗೆ 12 ವರ್ಷ. ಅದಕ್ಕೇ ಲಸಿಕೆ ಹಾಕಿಸಿಕೊಂಡಿಲ್ಲ’ ಎಂದು ಯುವಕನೊಬ್ಬ ಸಮಜಾಯಿಷಿ ನೀಡಿದ. ಯುವಕನಿಗೆ ಗಡ್ಡ ಮೀಸೆ ಬಂದಿರುವುದನ್ನು ನೋಡಿ, ‘12 ವರ್ಷಕ್ಕೇ ಗಡ್ಡ ಬಂದು ಬಿಡ್ತಾ ನಿಂಗೆ’ ಎಂದು ಕೇಳಿದ ಜಿಲ್ಲಾಧಿಕಾರಿ, ‘ಹಾಕ್ರಿ ಇವನಿಗೆ ಲಸಿಕೆ’ ಎಂದು ರಸ್ತೆಯಲ್ಲೇ ಲಸಿಕೆ ಹಾಕಿಸಿದರು.
ಇಂಥ ಹಲವು ಸ್ವಾರಸ್ಯಕರ ಘಟನೆಗಳಿಗೆ ಬುಧವಾರ ಲಸಿಕಾ ಅಭಿಯಾನ ಸಾಕ್ಷಿಯಾಯಿತು. ಪಾಲಿಕೆ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.