ADVERTISEMENT

ದಾವಣಗೆರೆ| ದಂತ ವೈದ್ಯಾಧಿಕಾರಿ ಹುದ್ದೆ ಆಮಿಷ: ₹7.54 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 5:26 IST
Last Updated 22 ಫೆಬ್ರುವರಿ 2023, 5:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ದಂತ ವೈದ್ಯಾಧಿಕಾರಿಗಳ ಹುದ್ದೆ ಕೊಡಿಸುವುದಾಗಿ ನಂಬಿಸಿ ಇಬ್ಬರು ದಂತ ವೈದ್ಯರಿಗೆ ₹ 7.54 ಲಕ್ಷ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ದಾವಣಗೆರೆ ತಾಲ್ಲೂಕಿನ ಹೂವಿನಮಡು ಗ್ರಾಮದ ವೈದ್ಯಾಧಿಕಾರಿ ಡಾ. ಭುವನೇಶ್‌ ನಾಯ್ಕ ಹಾಗೂ ಕಾಲೇಜ್ ಆಫ್‌ ಡೆಂಟಲ್ ಸೈನ್ಸ್‌ನ ಉಪನ್ಯಾಸಕ ಡಾ.ಸತ್ಯಪ್ರಸಾದ್ ಮೋಸ ಮಾಡಿದವರು.

ಹೊಳಲ್ಕೆರೆಯ ಸಂತೋಷ್ ದಂತ ಚಿಕಿತ್ಸಾಲಯದ ವೈದ್ಯ ಡಾ.ಕೆ.ವಿ. ಸಂತೋಷ್ ಹಾಗೂ ಮತ್ತೊಬ್ಬ ವೈದ್ಯ ಡಾ.ಮಹಮದ್ ಇಮ್ರಾನುಲ್ಲಾ ಮೋಸ ಹೋದವರು.

ADVERTISEMENT

2020 ಸೆಪ್ಟೆಂಬರ್‌ನಲ್ಲಿ ದಂತ ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಆಗ ಇವರಿಬ್ಬರೂ ಅರ್ಜಿ ಸಲ್ಲಿಸಿದ್ದರು. ‘ಭುವನೇಶ್‌ ನಾಯ್ಕ್ ನನಗೆ ಪರಿಚಯವಿದ್ದು, ಅವರಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಂಪರ್ಕವಿದೆ. ಹುದ್ದೆಗೆ ಆಯ್ಕೆ ಮಾಡಲು ₹10 ಲಕ್ಷವಾಗುತ್ತದೆ’ ಎಂದು ಸಂತೋಷ್ ಅವರಿಗೆ ಸ್ನೇಹಿತರಾಗಿದ್ದ ಸತ್ಯಪ್ರಸಾದ್ ಮುಂಡವಾಗಿ ₹5 ಲಕ್ಷ ಕೊಡಬೇಕು’ ಎಂದು ನಂಬಿಸಿದ್ದರು.

ನಗರದ ಸ್ಟೇಡಿಯಂ ಹಿಂಭಾಗದ ರಸ್ತೆಯಲ್ಲಿ ಸಂತೋಷ್ ಅವರಿಂದ ₹ 3 ಲಕ್ಷ ಹಾಗೂ ಮಹಮದ್ ಇಮ್ರಾನ್‌ ಉಲ್ಲಾ ಅವರಿಂದ ₹2.50 ಲಕ್ಷವನ್ನೂ ಭುವನೇಶ್ ಹಾಗೂ ಸತ್ಯಪ್ರಸಾದ್ ವಸೂಲಿ ಮಾಡಿದ್ದರು. ವಾಟ್ಸ್‌ ಆ್ಯಪ್‌ನಲ್ಲಿ ನಕಲಿ ಆಯ್ಕೆ ಪಟ್ಟಿ ಕಳುಹಿಸಿದಾಗ ಅದರಲ್ಲಿ ಈ ಇಬ್ಬರು ದಂತ ವೈದ್ಯರ ಹೆಸರಿತ್ತು. ಆ ಬಳಿಕ ಸಂತೋಷ್‌ ಅವರಿಂದ ₹1.54 ಲಕ್ಷ ಹಾಗೂ ಇಮ್ರಾನ್ ಉಲ್ಲಾ ಅವರಿಂ ₹ 50 ಸಾವಿರ ವಸೂಲಿ ಮಾಡಿದ್ದರು. ಆದರೆ ಆ ವೇಳೆ ನೇಮಕಾತಿ ಪಟ್ಟಿ ಬಿಡುಗಡೆ ಆಗಿರಲಿಲ್ಲ.

2022ರ ಮೇ 17ರಂದು ಬಿಡುಗಡೆಯಾದ ನೇಮಕಾತಿ ಪಟ್ಟಿಯಲ್ಲಿ ಇವರ ಹೆಸರು ಇರಲಿಲ್ಲ. ಆಗ ಮೋಸ ಮಾಡಿರುವುದು ಗೊತ್ತಾಗಿದೆ.

ಬಡಾವಣೆ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.