ADVERTISEMENT

ಜಾತ್ರೆ, ಸಂತೆಗಳಲ್ಲಿ ಖೋಟಾ ನೋಟು ಚಲಾವಣೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 9:24 IST
Last Updated 29 ಜನವರಿ 2020, 9:24 IST
ದಾವಣಗೆರೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ದಾವಣಗೆರೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ದಾವಣಗೆರೆ: ಖೋಟಾ ನೋಟು ಚಲಾವಣೆ ಮಾಡಲು ಆರೋಪಿಗಳು ವಿವಿಧ ಗ್ರಾಮಗಳಲ್ಲಿ ನಡೆಯುವ ಜಾತ್ರೆಗಳು ಹಾಗೂ ಸಂತೆಗಳಲ್ಲಿ ಗ್ರಾಮೀಣ ಭಾಗದ ಮುಗ್ಧ ಜನರು ಹಾಗೂ ವೃದ್ಧರನ್ನು ನೋಟು ಚಲಾವಣೆಗೆ ಗುರಿಯಾಗಿಸಿಕೊಂಡಿದ್ದಾರೆ.

‘ಜ.26ರಂದು ಲೋಲೇಶ್ವರ ಜಾತ್ರೆಯ ಸಮಯದಲ್ಲಿ ಚಲಾವಣೆ ಮಾಡುತ್ತಿದ್ದ ಸಂದರ್ಭ ಸಾರ್ವಜನಿಕರಾದ ಮಲ್ಲಿಕಾರ್ಜುನ, ಕುರುವತ್ತೆಪ್ಪ ಹಾಗೂ ಸೋಮಶೇಖರಪ್ಪ ಅವರು ಆರೋಪಿ ಹನುಮಂತಪ್ಪನನ್ನು ಹಿಡಿದು ಠಾಣೆಗೆ ಒಪ್ಪಿಸಿದ ಬಳಿಕ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಯಿತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಿಇಎನ್ ಇನ್‌ಸ್ಪೆಕ್ಟರ್ ತನಿಖೆ
‘ಹೂವಿನ ಹಡಗಲಿ, ಕೊಟ್ಟೂರು ಹಾಗೂ ಸುತ್ತಮುತ್ತಲ ಪ್ರದೇಶಗಳ ಜಾತ್ರೆ ಹಾಗೂ ಸಂತೆಗಳಲ್ಲಿ ನೋಟುಗಳು ಚಲಾವಣೆ ಆಗಿರುವ ಸಂಭವವಿದ್ದು, ಸಾರ್ವಜನಿಕರು ಮಾಹಿತಿ ಕೊಟ್ಟರೆ ಪ್ರಕರಣಗಳನ್ನು ಭೇದಿಸಬಹುದು. ನೋಟುಗಳ ಸರಣಿ ಸಂಖ್ಯೆ ಒಂದೇ ಆಗಿದುದ್ದರಿಂದ ಖೋಟಾ ನೋಟು ಎಂದು ಕಂಡು ಹಿಡಿಯಲು ಸಹಾಯವಾಯಿತು. ಸರಣಿ ಎಫ್‌ಐಸಿಎಲ್ ಪ್ರಕರಣವಾಗಿರುವುದರಿಂದ ಮುಂದಿನ ತನಿಖೆಯನ್ನು ಜಿಲ್ಲೆಯ ನೋಡೆಲ್ ಅಧಿಕಾರಿಯಾಗಿರುವ ಸಿಇಎನ್ ಠಾಣೆಯ ಇನ್‌ಸ್ಪೆಕ್ಟರ್ ಮುಸ್ತಾಕ್ ವಿಸ್ತೃತ ತನಿಖೆ ಕೈಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಬಂಧಿತರದಲ್ಲಿ ಪುಟ್ಟಪ್ಪ ಎಂಬಾತನ ವಿರುದ್ಧ ಬೆಂಗಳೂರು ನಗರದಲ್ಲಿ ಖೋಟಾ ನೋಟು ಪ್ರಕರಣ ದಾಖಲಾಗಿದೆ. ಬಂಧಿತರದಲ್ಲಿ ಸಂಬಂಧಿಕರು ಹಾಗೂ ಅಣ್ಣ ತಮ್ಮಂದಿರು ಇದ್ದಾರೆ. ಪುಟ್ಟಪ್ಪ ಅವರಿಂದಲೇ ಕಲೆಯನ್ನು ಕಲಿತುಕೊಂಡಿರಬಹುದು ಎಂಬ ಸಂಶಯವಿದೆ. ಬಂಧಿತರಲ್ಲಿ ನಕಲಿ ನೋಟುಗಳನ್ನು ಜೆರಾಕ್ಸ್ ಮಾಡುವವರು, ಮಾರುಕಟ್ಟೆಯಲ್ಲಿ ಮಾರಾಟ ಮಾಡುವವರು ಸೇರಿದ್ದಾರೆ’ ಎಂದರು.

ಹರಪನಹಳ್ಳಿ ಡಿ.ವೈ.ಎಸ್.ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಕುಮಾರ್.ಕೆ ಅವರ ನೇತೃತ್ವದಲ್ಲಿ ಚಿಗಟೇರಿ ಪಿಎಸ್‌ಐ ಪ್ರಕಾಶ, ಪಿಎಸ್‌ಐ (ಅಪರಾಧ ವಿಭಾಗ) ಲತಾ ವಿ. ತಾಳೇಕರ್, ಪಿಎಸ್‌ಐ (ಕಾನೂನು ಮತ್ತು ಸುವ್ಯವಸ್ಥೆ) ಪಿಎಸ್‌ಐ ಶ್ರೀಧರ್.ಕೆ, ಸಿಬ್ಬಂದಿ ಮಲ್ಲಿಕಾರ್ಜುನನಾಯ್ಕ, ಕೊಟ್ಟೂರೇಶ, ದೇವೇಂದ್ರಪ್ಪ, ಕುಮಾರ, ಇಮಾಂ ಸಾಹೇಬ್, ಮನೋಹರ್ ಪಾಟೀಲ್, ರವಿ ದಾದಾಪುರ, ಮಹಾಂತೇಶ ಬಿಳಿಚೋಡು, ಚಂದ್ರು ಎಸ್.ಜಿ, ಅಜ್ಜಪ್ಪ, ರವಿಕುಮಾರ, ಮತ್ತಿಹಳ್ಳಿ ಕೊಟ್ರೇಶ, ಹಾಲೇಶ ಜಿ.ಎಂ, ನಾಗರಾಜ ಸುಣಗಾರ, ಗುರುರಾಜ, ಮಾರುತಿ ಬಿ, ಶಿವರಾಜ ಹೂಗಾರ, ವಿಷ್ಣುವರ್ಧನ ಚಾಲಕರಾದ ಹನುಮಂತಪ್ಪ, ವಿನೋದಕುಮಾರ ಅವರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಸಿಬ್ಬಂದಿ, ಕಳ್ಳರನ್ನು ಹಿಡಿಯಲು ಸಹಾಯ ಮಾಡಿದ ಮಲ್ಲಿಕಾರ್ಜುನ, ಕುರುವತ್ತೆಪ್ಪ ಹಾಗೂ ಸೋಮಶೇಖರಪ್ಪ ಅವರನ್ನು ಸನ್ಮಾನಿಸಿ ನಗದು ಬಹುಮಾನ ನೀಡಲಾಯಿತು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.