ದಾವಣಗೆರೆ: ಕೆಎಸ್ಆರ್ಟಿಸಿ ದಾವಣಗೆರೆ ವಿಭಾಗದ ದಾವಣಗೆರೆ ಘಟಕಕ್ಕೆ 9 ಹೊಸ ಬಸ್ಗಳು ಬಂದಿವೆ. ಮಾರ್ಚ್ ಅಂತ್ಯದೊಳಗೆ ಇನ್ನೂ 20 ಬಸ್ಗಳು ಬಸ್ಗಳು ಬರಲಿದ್ದು, ಹಳೇ ಬಸ್ಗಳು ಗುಜರಿ ಸೇರಲಿವೆ.
ವೋಲ್ವೊ ಮಲ್ಟಿ ಆ್ಯಕ್ಸಲ್ನ 5 ಬಸ್ಗಳು ಬಂದಿವೆ. ಅದರಲ್ಲಿ ದಾವಣಗೆರೆ–ಬೆಂಗಳೂರು–ಬಳ್ಳಾರಿ ಮಾರ್ಗದಲ್ಲಿ 2 ಬಸ್ಗಳನ್ನು ನೂತನವಾಗಿ ಓಡಿಸಲಾಗುತ್ತಿದೆ. ಉಳಿದ ಮೂರು ಈಗಾಗಲೇ ಬೆಂಗಳೂರಿಗೆ ಹೋಗುತ್ತಿರುವ ಸಿಂಗಲ್ ಆ್ಯಕ್ಸಲ್ ಬಸ್ಗಳ ಬದಲಿಯಾಗಿ ಸಂಚರಿಸಲಿವೆ. ಸಿಂಗಲ್ ಆ್ಯಕ್ಸಲ್ ಬಸ್ಗಳು 15 ಲಕ್ಷ ಕಿಲೋಮೀಟರ್ ಓಡಿರುವುದರಿಂದ ಅವನ್ನು ಗುಜರಿಗೆ ಹಾಕಲಾಗುವುದು ಎಂದು ನಿಗಮದ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಕರ್ನಾಟಕ ಸಾರಿಗೆಯ 4 ಹೊಸ ಬಸ್ಗಳು ಬಂದಿವೆ. ಅದರಲ್ಲಿ ಎರಡು ದಾವಣಗೆರೆ–ಸಂತೇಬೆನ್ನೂರು–ಚನ್ನಗಿರಿ ಹೊಸ ಮಾರ್ಗದಲ್ಲಿ ಸೋಮವಾರ ಸಂಚಾರ ಆರಂಭಿಸಿವೆ. ದಾವಣಗೆರೆ–ರಾಣೇಬೆನ್ನೂರು ಮಾರ್ಗದಲ್ಲಿ ಎರಡು ಮಿನಿ ಬಸ್ಗಳು ಓಡುತ್ತಿದ್ದು, ಅವುಗಳ ಬದಲು ಕರ್ನಾಟಕ ಸಾರಿಗೆಯ ಎರಡು ಹೊಸ ಬಸ್ಗಳು ಓಡಲಿವೆ. ಆ ಮಿನಿಬಸ್ಗಳು ಇನ್ನುಮುಂದೆ ವಿದ್ಯಾನಗರ–ಹೈಟೆಕ್ ಆಸ್ಪತ್ರೆ ಮಾರ್ಗದಲ್ಲಿ ಓಡಲಿವೆ. ಇಲ್ಲಿವರೆಗೆ ವಿದ್ಯಾನಗರ–ಹೈಟೆಕ್ ಆಸ್ಪತ್ರೆ ನಡುವೆ ಕೆಎಸ್ಆರ್ಟಿಸಿ ಬಸ್ಗಳು ಓಡುತ್ತಿರಲಿಲ್ಲ ಎಂದು ಅವರು ಮಾಹಿತಿ ನೀಡಿದರು.
ಒಟ್ಟು 29 ಹೊಸ ಬಸ್ಗಳು ಸಂಚರಿಸಲಿರುವುದರಿಂದ ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ಇನ್ನಷ್ಟು ಉತ್ತೇಜನ ನೀಡಿದಂತಾಗಲಿದೆ. ಹಳೇ ಬಸ್ಗಳ ಬದಲು ಹೊಸ ಬಸ್ಗಳು ಬರುತ್ತಿರುವುದರಿಂದ ಪ್ರಯಾಣಿಕರು ಕೆಎಸ್ಆರ್ಟಿಸಿಯಲ್ಲೇ ಓಡಾಡಲು ಅನುಕೂಲ ಮಾಡಿದಂತಾಗುತ್ತದೆ. ಜನರು ಇದೆ ಉಪಯೋಗ ಪಡೆದುಕೊಳ್ಳಬೇಕು ಎಂಬುದು ಅವರ ಅಭಿಪ್ರಾಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.