ADVERTISEMENT

ದಾವಣಗೆರೆ: ಉಸಿರುಗಟ್ಟಿ ತಾಯಿ-ಮಗ ಸಾವು

ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಸಂಭವಿಸಿದ ಅಗ್ನಿ ಅವಘಡ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 15:35 IST
Last Updated 1 ಜುಲೈ 2025, 15:35 IST
ದಾವಣಗೆರೆಯ ಕಾಯಿಪೇಟೆಯ ಮನೆಯೊಂದರಲ್ಲಿ ಮಂಗಳವಾರ ನಸುಕಿನಲ್ಲಿ ಅಗ್ನಿ ಅವಘಡ ಸಂಭವಿಸಿದ ಮನೆ
ದಾವಣಗೆರೆಯ ಕಾಯಿಪೇಟೆಯ ಮನೆಯೊಂದರಲ್ಲಿ ಮಂಗಳವಾರ ನಸುಕಿನಲ್ಲಿ ಅಗ್ನಿ ಅವಘಡ ಸಂಭವಿಸಿದ ಮನೆ   

ದಾವಣಗೆರೆ: ಇಲ್ಲಿನ ಕಾಯಿಪೇಟೆಯ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಎಚ್.ಎಂ. ರುದ್ರಮುನಿಸ್ವಾಮಿ ಅವರ ಮನೆಯಲ್ಲಿ ಮಂಗಳವಾರ ನಸುಕಿನಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ದಟ್ಟವಾಗಿ ಆವರಿಸಿದ ಹೊಗೆಯಿಂದ ಉಸಿರುಕಟ್ಟಿ ತಾಯಿ–ಮಗ ಮೃತಪಟ್ಟಿದ್ದಾರೆ.

ಕಾಯಿಪೇಟೆ ನಿವಾಸಿ ವಿಮಲಾ ಬಾಯಿ (74) ಹಾಗೂ ಪುತ್ರ ಕುಮಾರ್‌ ಪಾಲ್‌ ಜೈನ್‌ (35) ಮೃತಪಟ್ಟವರು. ಕುಟುಂಬದ ಇನ್ನೂ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಅಲಂಕಾರಿಕ ಮೀನಿನ ಅಕ್ವೇರಿಯಂಗೆ ಸಂಪರ್ಕ ಕಲ್ಪಿಸಿದ ವಿದ್ಯುತ್‌ನಿಂದ ಶಾರ್ಟ್‌ ಸರ್ಕಿಟ್‌ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ನಸಿಕಿನ 3.30ರ ಸುಮಾರಿಗೆ ಮನೆಯಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ ಉಂಟಾಗಿದೆ. ಹಾಲ್‌ನಲ್ಲಿದ್ದ ಅಕ್ವೇರಿಯಂನ ಜಂಕ್ಷನ್‌ ಬಾಕ್ಸ್‌ನಿಂದ ಹಾರಿದ ಬೆಂಕಿಯ ಕಿಡಿ ಪೀಠೋಪಕರಣಗಳಿಗೆ ತಗುಲಿದೆ. ಮನೆಯನ್ನು ಆವರಿಸಿಕೊಂಡ ದಟ್ಟ ಹೊಗೆಯಿಂದ ಉಸಿರಾಟಕ್ಕೆ ಸಮಸ್ಯೆ ಉಂಟಾಗಿ ಅವಘಡ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

‘ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ನಾನು ಕೊಠಡಿಯೊಂದರಲ್ಲಿ ಮಲಗಿದ್ದೆ. ಅಳಿಯ ಹಾಗೂ ಅತ್ತೆ ಮತ್ತೊಂದು ಕೊಠಡಿಯಲ್ಲಿ ನಿದ್ರೆಗೆ ಜಾರಿದ್ದರು. ನಸುಕಿನ 3.30ರ ಸುಮಾರಿಗೆ ಕಿಟಕಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಗಾಬರಿಯಿಂದ ಬಾಗಿಲು ತೆಗೆದಾಗ ದಟ್ಟವಾದ ಹೊಗೆ ಕೊಠಡಿಗೆ ನುಗ್ಗಿತು. ಹಾಲ್‌ನಲ್ಲಿ ಬೆಂಕಿ ಹಾಗೂ ಹೊಗೆ ಹೆಚ್ಚಾಗಿದ್ದರಿಂದ ಹಿಂಬಾಗಿಲು ಮೂಲಕ ಹೊರಬಂದೆವು’ ಎಂದು ಮನೆಯ ಮಾಲೀಕ ಎಚ್.ಎಂ. ರುದ್ರಮುನಿಸ್ವಾಮಿ ಘಟನೆಯನ್ನು ವಿವರಿಸಿದರು.

‘ಮನೆಯಿಂದ ಹೊರಬರುವ ಮುನ್ನ ಅಳಿಯ ಕುಮಾರನನ್ನು ಕೂಗಿ ಕರೆದೆ. ವಿಮಲಾ ಅವರನ್ನು ಕರೆದುಕೊಂಡು ಬರುವ ಪ್ರಯತ್ನದಲ್ಲಿ ಇರುವುದಾಗಿ ಪ್ರತಿಕ್ರಿಯಿಸಿದ್ದರು. ಮನೆಯಿಂದ ಹೊರಬಂದು ಮೊಬೈಲ್‌ ಕರೆ ಮಾಡಿ ಮಾತನಾಡಿದೆ. ಮುಂಬಾಗಿಲ ಬಳಿ ಹೊಗೆಯ ಪ್ರಮಾಣ ಹೆಚ್ಚಾಗಿದ್ದು, ಮೊದಲ ಮಹಡಿಗೆ ತೆರಳಲು ಸೂಚಿಸಿದೆ. ಇದಕ್ಕೆ ಕುಮಾರ್‌ ಕೂಡ ಒಪ್ಪಿದ್ದರು’ ಎಂದು ರುದ್ರಮುನಿಸ್ವಾಮಿ ಗದ್ಗದಿತರಾದರು.

ಬೆಂಕಿ ಅವಘಡವನ್ನು ಗಮನಿಸಿದ ಮನೆಯ ವಾಚ್‌ಮನ್‌ ಕೂಡಲೇ ನೆರವಿಗೆ ಧಾವಿಸಿದ್ದರು. ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಲು ಯತ್ನಿಸಿದ್ದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ ಬೆಂಕಿ ನಂದಿಸಿ ರಕ್ಷಣೆಗೆ ಮನೆಯನ್ನು ಪ್ರವೇಶಿಸಿದ್ದಾರೆ. ಕೊಠಡಿ ಬಾಗಿಲ ಬಳಿ ವಿಮಲಾ ಹಾಗೂ ಮತ್ತೊಂದೆಡೆ ಕುಮಾರ್‌ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದರು ಎಂದು ಮೂಲಗಳು ತಿಳಿಸಿವೆ.

‘ಇಬ್ಬರನ್ನು ಮನೆಯಿಂದ ಹೊರಗೆ ಕರೆತಂದು ಉಪಚರಿಸಿದೆವು. ದೇಹದ ಮೇಲೆ ಬೆಂಕಿಯ ಗಾಯಗಳು ಇರಲಿಲ್ಲ. ಉಸಿರಾಟದ ಸಮಸ್ಯೆ ಸರಿಹೋಗಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಿದೆವು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಇಬ್ಬರು ಮೃತಪಟ್ಟರು’ ಎಂದು ರುದ್ರಮುನಿಸ್ವಾಮಿ ಕಣ್ಣೀರಾದರು.

ಪೂರ್ವ ವಲಯದ ಐಜಿಪಿ ಬಿ.ಆರ್‌.ರವಿಕಾಂತೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ಸೇರಿದಂತೆ ಬಿಜೆಪಿ ಮುಖಂಡರು ಮನೆಗೆ ಭೇಟಿ ನೀಡಿ ರುದ್ರಮುನಿಸ್ವಾಮಿ ಅವರಿಗೆ ಸಾಂತ್ವನ ಹೇಳಿದರು.

ವಿಮಲಾ ಬಾಯಿ ಕುಮಾರ್‌ ಜೈನ್‌
ಅಕ್ವೇರಿಯಂಗೆ ಬಳಿ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಪೀಠೋಪಕರಣ ಭಸ್ಮವಾಗಿ ಆವರಿಸಿಕೊಂಡ ಹೊಗೆಯಿಂದ ಉಸಿರಾಟಕ್ಕೆ ತೊಂದರೆಯಾಗಿ ಸಾವು ಸಂಭವಿಸಿದೆ
ಉಮಾ ಪ್ರಶಾಂತ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಹೊಗೆ ಸೂಸಿದ ಸೋಫಾ

ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಉಸಿರುಗಟ್ಟಿ ಮೃತಪಡುವಷ್ಟು ಪ್ರಮಾಣದ ಹೊಗೆಯನ್ನು ಸೂಸಿದ್ದು ಹಾಲ್‌ನಲ್ಲಿದ್ದ ಚರ್ಮದ ಸೋಫಾ ಎಂಬುದು ಪೊಲೀಸರ ಪ್ರಾಥಮಿಕ ಪರಿಶೀಲನೆಯಿಂದ ಗೊತ್ತಾಗಿದೆ. ‘ಚರ್ಮದ ಪೀಠೋಪಕರಣಕ್ಕೆ ತಗುಲಿದ ಬೆಂಕಿಯಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ. ಭಸ್ಮವಾದ ಇತರ ಉಪಕರಣಗಳಿಂದಲೂ ಹೊಗೆಯ ಪ್ರಮಾಣ ಹೆಚ್ಚಾಗಿದೆ. ಉಸಿರಾಟಕ್ಕೆ ಸಾಧ್ಯವಾಗದ ಸ್ಥಿತಿ ಬೆಳಿಗ್ಗೆಯವರೆಗೂ ಮನೆಯಲ್ಲಿತ್ತು. ಕಾರ್ಬನ್‌ ಡೈಆಕ್ಸೈಡ್‌ ಪ್ರಮಾಣ ಹೆಚ್ಚಾಗಿತ್ತು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.