
ದಾವಣಗೆರೆ: ‘ಜಿಲ್ಲಾಧಿಕಾರಿ ಕಚೇರಿಯಲ್ಲಿ 5 ಬಾಂಬ್ಗಳು ಶೀಘ್ರದಲ್ಲೇ ಸ್ಫೋಟಿಸಲಿವೆ’ ಎಂದು ಜಿಲ್ಲಾಧಿಕಾರಿಯ ಅಧಿಕೃತ ಮೇಲ್ಗೆ ಬಂದಿದ್ದ ಬೆದರಿಕೆಯ ಸಂದೇಶ ಪೊಲೀಸರ ಪರಿಶೀಲನೆಯ ಬಳಿಕ ಹುಸಿ ಎಂಬುದು ಖಚಿತವಾಗಿದೆ. ‘ಇ–ಮೇಲ್’ ಜಾಡು ಹಿಡಿದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸೋಮವಾರ ನಸುಕಿನ 1 ಗಂಟೆಗೆ ಬಂದಿದ್ದ ‘ಇ–ಮೇಲ್’ ಸಂದೇಶವನ್ನು ಗಮನಿಸಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಪೊಲೀಸರ ಗಮನಕ್ಕೆ ತಂದಿದ್ದರು. ಬೆದರಿಕೆ ಸಂದೇಶದ ಮಾಹಿತಿ ತಿಳಿಯುತ್ತಿದ್ದಂತೆ ಮಂಗಳವಾರ ಜಿಲ್ಲಾಡಳಿತ ಭವನಕ್ಕೆ ಧಾವಿಸಿದ ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳದ ಸಿಬ್ಬಂದಿ ಸಂಪೂರ್ಣ ಪರಿಶೀಲಿನೆ ನಡೆಸಿದರು. ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
‘ಪಾಕಿಸ್ತಾನದ ಐಎಸ್ಐ ಹಾಗೂ ತಮಿಳುನಾಡಿನ ಮಾಜಿ ಎಲ್ಟಿಟಿಇ ಕಾರ್ಯಕರ್ತರು ಜಂಟಿಯಾಗಿ ರಿಮೋಟ್ ಕಂಟ್ರೋಲ್ ಬಾಂಬ್ ಸ್ಫೋಟ ಮಾಡಲಿದ್ದೇವೆ. ಇದರಿಂದ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡ ಹಾಗೂ ಜನರಿಗೆ ಭಾರಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ಶೀಘ್ರವೇ ಜನರನ್ನು ತೆರವುಗೊಳಿಸಿ’ ಎಂಬ ಅರ್ಥ ಬರುವಂತಹ ಆಂಗ್ಲ ಭಾಷೆಯ ಸಂದೇಶ ‘ಇ–ಮೇಲ್’ನಲ್ಲಿದೆ.
‘ಜಿಲ್ಲಾಧಿಕಾರಿ ಕಚೇರಿಯ ಅಧಿಕೃತ ಮೇಲ್ ವಿಳಾಸಕ್ಕೆ ಬಾಂಬ್ ಬೆದರಿಕೆಯ ಇ–ಮೇಲ್ ಸಂದೇಶ ಸೋಮವಾರ ನಸುಕಿನಲ್ಲಿ ಬಂದಿತ್ತು. ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ಸಿದ್ಧತೆಯಲ್ಲಿ ತೊಡಗಿದ್ದರಿಂದ ಸಂದೇಶ ಗಮನಿಸುವುದು ಕೊಂಚ ವಿಳಂಬವಾಯಿತು. ಈ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ರವಾನಿಸಿದ್ದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
‘ಶ್ವಾನದಳ ಹಾಗೂ ಬಾಂಬ್ ಪತ್ತೆ ದಳದ ಸಿಬ್ಬಂದಿ ಜಿಲ್ಲಾಡಳಿತ ಭವನದ ತಳಮಹಡಿ ಹಾಗೂ ಮೊದಲ ಮಹಡಿಯನ್ನು ಸಂಪೂರ್ಣ ಪರಿಶೀಲಿಸಿ ಸ್ಫೋಟಕ ಇಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಆಂಗ್ಲ ಭಾಷೆಯಲ್ಲಿರುವ ಇ–ಮೇಲ್ ಸಂದೇಶ ಸರಿಯಾಗಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.
ಮೇಲ್ನೋಟಕ್ಕೆ ಇದೊಂದು ಹುಸಿ ಬೆದರಿಕೆ ಎಂಬುದು ಖಚಿತವಾಗಿದೆ. ಜಿಲ್ಲಾಡಳಿತ ಭವನ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ.– ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.