
ಮನು ಮತ್ತು ಚೇತನ್
ದಾವಣಗೆರೆ: ನಗರದ ಕುಂದುವಾಡ ಕೆರೆಯಲ್ಲಿ ಯುವಕರಿಬ್ಬರ ಮೃತದೇಹಗಳು ಮಂಗಳವಾರ ಪತ್ತೆಯಾಗಿವೆ. ಇಲ್ಲಿನ ಶಾಂತಿನಗರದ ನಿವಾಸಿಗಳಾದ ಮನು (19) ಹಾಗೂ ಚೇತನ್ (22) ಮೃತರು.
ಭಾನುವಾರ ಸಂಜೆಯಿಂದ ಮನು ಹಾಗೂ ಚೇತನ್ ನಾಪತ್ತೆಯಾಗಿದ್ದರು. ಪೋಷಕರು ಹಾಗೂ ಸಂಬಂಧಿಕರು ಯುವಕರಿಗಾಗಿ ಹುಡುಕಾಟ ನಡೆಸಿದ್ದರು. ಸೋಮವಾರ ಸಂಜೆ ಕುಂದುವಾಡ ಕೆರೆಯ ದಡದ ಬಳಿ ಯುವಕರ ಬಟ್ಟೆ, ಮೊಬೈಲ್ ಹಾಗೂ ಬೈಕ್ ಪತ್ತೆಯಾಗಿದ್ದವು.
ಮುಳುಗುತಜ್ಞರ ಸಹಾಯದಿಂದ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದಾಗ ಮಂಗಳವಾರ ಮೃತದೇಹ ಪತ್ತೆಯಾಗಿವೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ‘ಅನುಮಾನಾಸ್ಪದ ಸಾವು’ ಪ್ರಕರಣ ದಾಖಲಿಸಲಾಗಿದೆ.
ಮೀನಿನ ಆಸೆಗೆ ಬಲಿ?: ಯುವಕರು ಕೆರೆಯಲ್ಲಿ ರಾತ್ರಿ ವೇಳೆ ಮೀನು ಹಿಡಿಯಲು ಹೋದಾಗ ಮೀನಿನ ಬಲೆಗೆ ಸಿಲುಕಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಟೆಂಡರ್ ಪಡೆದವರು ನಿತ್ಯವೂ ಮೀನು ಹಿಡಿಯಲು ರಾತ್ರಿ ಬಲೆ ಹಾಕುತ್ತಾರೆ. ಯುವಕರು ಅನಧಿಕೃತವಾಗಿ ಮೀನು ಹಿಡಿಯಲು ಕೆರೆಗೆ ಇಳಿದಾಗ ಬಲೆಗೆ ಸಿಲುಕಿ ಮೃತಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.