ADVERTISEMENT

ದಾವಣಗೆರೆ: ಏರಿಳಿತದಲ್ಲೇ ಸಾಗಿದ ಟೊಮೆಟೊ ದರ

ರಾಮಮೂರ್ತಿ ಪಿ.
Published 25 ಜನವರಿ 2026, 7:45 IST
Last Updated 25 ಜನವರಿ 2026, 7:45 IST
ದಾವಣಗೆರೆಯ ಕೆ.ಆರ್‌. ಮಾರುಕಟ್ಟೆಯಲ್ಲಿ ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ದಾವಣಗೆರೆಯ ಕೆ.ಆರ್‌. ಮಾರುಕಟ್ಟೆಯಲ್ಲಿ ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ   

ದಾವಣಗೆರೆ: ಮಾರುಕಟ್ಟೆಯಲ್ಲಿ ಟೊಮೆಟೊ ದರ ಏರಿಳಿತದಲ್ಲೇ ಸಾಗಿದೆ. ಒಮ್ಮೊಮ್ಮೆ ಪ್ರತಿ ಕೆ.ಜಿ.ಗೆ ₹ 50ರಿಂದ ₹ 60ರವರೆಗೆ ದರ ಹೆಚ್ಚಿಸಿಕೊಳ್ಳುವ ಟೊಮೆಟೊ, ಕೆಲವೊಮ್ಮೆ ₹ 10ರಿಂದ ₹ 15ಕ್ಕೆ ಕುಸಿಯುತ್ತಿದೆ.

ವಾರದ ಹಿಂದೆಯಷ್ಟೇ ಇಲ್ಲಿನ ಕೆ.ಆರ್‌. ಮಾರುಕಟ್ಟೆಯಲ್ಲಿ ಟೊಮೆಟೊ ₹ 15ರಂತೆ ಮಾರಾಟವಾಗಿತ್ತು. ಶನಿವಾರ ₹ 25ಕ್ಕೆ ಕೆ.ಜಿ.ಯಂತೆ ಮಾರಾಟವಾಯಿತು.

25 ಕೆ.ಜಿ.ಯ ಟೊಮೆಟೊ ಬಾಕ್ಸ್‌ ವಾರದ ಹಿಂದೆ ₹ 200ರಿಂದ ₹ 250ಕ್ಕೆ ಬಿಕರಿಯಾಗಿತ್ತು. ಶುಕ್ರವಾರ ಹಾಗೂ ಶನಿವಾರ ಅದರ ದರ ₹ 400ಕ್ಕೆ ಮಾರಾಟವಾಗಿದೆ. ದರ ಏರಿಳಿತದ ನಡುವೆಯೂ ಈ ವಾರ ಟೊಮೆಟೊ ಬೆಳೆಗಾರರ ಕೈಹಿಡಿದಿದೆ. 

ADVERTISEMENT

ಬಾಗಿದ ನುಗ್ಗೆಕಾಯಿ:

ಕೆ.ಜಿ.ಗೆ ₹ 200ರ ಗಡಿ ದಾಟಿದ್ದ ನುಗ್ಗೆಕಾಯಿ ದರವು ವಾರದಿಂದ ಅಲ್ಪ ತಗ್ಗಿದ್ದು, ಇದೀಗ ₹ 150ರಂತೆ ಮಾರಾಟವಾಗುತ್ತಿದೆ. ಇನ್ನು ₹ 40 ಇದ್ದ ಹೀರೇಕಾಯಿ ₹ 20 ಹೆಚ್ಚಿಸಿಕೊಂಡು ₹ 60ರಂತೆ ಬಿಕರಿಯಾಗುತ್ತದೆ. 

ಬೀನ್ಸ್‌ ದರವೂ ₹ 20 ಹೆಚ್ಚಿದ್ದು, ₹ 60ರಂತೆ ಮಾರಾಟವಾಗುತ್ತಿದೆ. ₹ 60ರಿಂದ ₹ 80ರ ಆಸುಪಾಸಿನಲ್ಲಿದ್ದ ಹಾಗಲಕಾಯಿ ದರ ₹ 40ಕ್ಕೆ ಕುಸಿದಿದ್ದು, ಗ್ರಾಹಕರಿಗೆ ‘ಸಿಹಿ’ ನೀಡಿದೆ. 

ಹುಣಸೆಹಣ್ಣು ಕೆ.ಜಿ.ಗೆ ₹ 120, ಬೆಳ್ಳುಳ್ಳಿ ₹ 80ರಿಂದ ₹ 100, ಹಸಿಶುಂಠಿ ₹ 60, ನಿಂಬೆಹಣ್ಣು ₹ 10ಕ್ಕೆ 4ರಿಂದ 5ರಂತೆ ಮಾರಾಟವಾಗುತ್ತಿವೆ. 

‘ಚಳಿಯ ವಾತಾವರಣದ ಕಾರಣಕ್ಕೆ ನಿಂಬೆಹಣ್ಣಿಗೆ ಹೇಳಿಕೊಳ್ಳುವಂತಹ ಬೇಡಿಕೆ ಇಲ್ಲ. ಬಿಸಿಲು ಹೆಚ್ಚಾದಂತೆ ನಿಂಬೆಹಣ್ಣಿಗೆ ಬೇಡಿಕೆ ಹೆಚ್ಚಾಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಉತ್ತಮ ದರ ದೊರೆಯುವ ನಿರೀಕ್ಷೆ ಇದೆ’ ಎಂದು ವ್ಯಾಪಾರಿ ಇಸ್ಮಾಯಿಲ್ ಹೇಳಿದರು.

ಕೊತ್ತಂಬರಿ ₹ 10ಕ್ಕೆ 4 ಸಿವುಡು, ಮೆಂತ್ಯೆ ₹ 10ಕ್ಕೆ 3, ಪುದೀನ ₹ 5ಕ್ಕೆ 1, ಸಬ್ಬಸಗಿ ₹ 10ಕ್ಕೆ 2, ಪಾಲಕ್ ₹ 5ಕ್ಕೆ 1, ರಾಜಗಿರಿ ₹ 5ಕ್ಕೆ 1 ಹಾಗೂ ಕರಿಬೇವು ಕೆ.ಜಿ.ಗೆ ₹ 150ರಿಂದ ₹ 160ಕ್ಕೆ ಮಾರಾಟವಾಗುತ್ತಿವೆ. 

ವ್ಯಾಪಾರ ಜೋರು: 

ಜನವರಿ 25ರಂದು (ಭಾನುವಾರ) ಮದುವೆ, ಗೃಹಪ್ರವೇಶ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಸೂಕ್ತ ಎಂಬ ಕಾರಣ ಮಾರುಕಟ್ಟೆಯಲ್ಲಿ ಶನಿವಾರ ಗ್ರಾಹಕರ ದಂಡು ಕಂಡುಬಂತು. ಹಣ್ಣು– ತರಕಾರಿ ಹಾಗೂ ದಿನಸಿ ಸಾಮಗ್ರಿಗಳ ಖರೀದಿ ಜೋರಾಗಿತ್ತು.

‘ಜನವರಿ ಆರಂಭದಿಂದಲೂ ಹೇಳಿಕೊಳ್ಳುವಂತಹ ವ್ಯಾಪಾರ ನಡೆದಿರಲಿಲ್ಲ. ಆದರೆ, ಶನಿವಾರ ನಿರೀಕ್ಷೆಗೂ ಮೀರಿ ಗ್ರಾಹಕರು ಮಾರುಕಟ್ಟೆಗೆ ಆಗಮಿಸಿ ತರಕಾರಿ ಖರೀದಿಸಿದರು. ಉತ್ತಮ ವ್ಯಾಪಾರ ನಡೆಯಿತು’ ಎಂದು ವ್ಯಾಪಾರಿ ಎಸ್‌ಟಿಜಿ ರುದ್ರೇಶ್‌ ಸಂತಸ ಹಂಚಿಕೊಂಡರು. 

ದಾವಣಗೆರೆಯ ಕೆ.ಆರ್‌. ಮಾರುಕಟ್ಟೆಯಲ್ಲಿ ತರಕಾರಿ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.