ದಾವಣಗೆರೆ: ಅನಾರೋಗ್ಯದಿಂದ ಚಿಕಿತ್ಸೆ ಪಡೆಯಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ, ಸೂಕ್ತ ಚಿಕಿತ್ಸೆಗೆ ಯುವಕರೊಬ್ಬರು ಮೃತಪಟ್ಟಿದ್ದಾರೆ.
ನಗರದ ಎಸ್ಎಸ್ಎಂ ನಗರದ ಬಂದೇನವಾಜ್ ಲೇಔಟ್ ನಿವಾಸಿ ಮಹ್ಮದ್ ನಿಯಾಜ್ (24) ಮೃತಪಟ್ಟವರು.
ಅನಾರೋಗ್ಯದಿಂದ ದಾವಣಗೆರೆಯ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲಾಗಿದ್ದು, ಎರಡು ದಿವಸ ಚಿಕಿತ್ಸೆ ನೀಡಿ ನಂತರ ಬೇರೆ ಆಸ್ಪತ್ರೆಗೆ ಹೋಗುವಂತೆ ಆಸ್ಪತ್ರೆ ಸಿಬ್ಬಂದಿ ಸೂಚಿಸಿದ್ದರು. ಆನಂತರ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಕರೆ ತಂದಿದ್ದು, ಅಲ್ಲಿ ಕೋವಿಡ್–19 ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಲಾಯಿತು.
ಪಾಲಕರು ನಂತರ ಎಸ್.ಎಸ್. ಆಸ್ಪತ್ರೆಗೆ ದಾಖಲು ಮಾಡಿಸಿದರು. ಗುರುವಾರ ಬೆಳಿಗ್ಗೆ ದಾಖಲು ಮಾಡಿದ್ದು, ರಾತ್ರಿ ಯುವಕ ಮೃತಪಟ್ಟಿದ್ದು, ಎಸ್.ಎಸ್. ಆಸ್ಪತ್ರೆಯಲ್ಲಿ ಕೋವಿಡ್–19 ನೆಗೆಟಿವ್ ಬಂದ ಶವವನ್ನು ಪಾಲಕರಿಗೆ ಹಸ್ತಾಂತರಿಸಲಾಯಿತು.
‘ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ ನನ್ನ ಮಗನನ್ನು ಹೊರ ಹಾಕಿದ್ದರು.ಚಿಗಟೇರಿ ಆಸ್ಪತ್ರೆಯಲ್ಲಿ ಆಮ್ಲಜನಕ ಇಲ್ಲ ಎಂದು ಹೇಳಿ ಕಳುಹಿಸಿದ್ದು, ಮಗನ ಸಾವಿಗೆ ಕಾರಣ. ಸೂಕ್ತ ನ್ಯಾಯ ಸಿಗುವ ತನಕ ಹೋರಾಟ ಮಾಡುತ್ತೇವೆ’ ಎಂದು ಮೃತರ ತಂದೆ ಮಹಮ್ಮದ್ ಶರೀಫ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.