ADVERTISEMENT

ಕೊರೊನಾಕ್ಕೆ ಕುಂದದ ದೀಪಾವಳಿ ಸಂಭ್ರಮದ ಖರೀದಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 14:43 IST
Last Updated 14 ನವೆಂಬರ್ 2020, 14:43 IST
ದೀಪಾವಳಿಗೆ ಮಾವಿನಸೊಪ್ಪು, ಬಾಳೆದಿಂಡು ಖರೀದಿಸುತ್ತಿರುವ ಯುವತಿ
ದೀಪಾವಳಿಗೆ ಮಾವಿನಸೊಪ್ಪು, ಬಾಳೆದಿಂಡು ಖರೀದಿಸುತ್ತಿರುವ ಯುವತಿ   

ದಾವಣಗೆರೆ: ಆರೋಗ್ಯ ಮತ್ತು ಆರ್ಥಿಕತೆಗೆ ಕೊರೊನಾ ನೀಡಿದ ಹೊಡೆತದ ಬಳಿಕವೂ ಜನರಲ್ಲಿ ಹಬ್ಬ ಮಾಡುವ ಉತ್ಸಾಹ ಕುಂದಿಲ್ಲ. ಹಾಗಾಗಿ ದೀಪಾವಳಿಗೆ ಖರೀದಿಯು ಶನಿವಾರವೂ ಉತ್ಸಾಹದಿಂದ ನಡೆಯಿತು.

ಜಯದೇವ ಸರ್ಕಲ್‌ನಿಂದ ಪಿ.ಬಿ.ರೋಡ್‌ವರೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸಂಜೆವರೆಗೆ ವ್ಯಾಪಾರ ನೂಕುನುಗ್ಗಲಿಲ್ಲದೇ ನಡೆಯಿತು. ಸೂರ್ಯ ಪಶ್ಚಿಮದ ಕಡೆ ಹೋಗುತ್ತಿದ್ದಂತೆ ಮಾರುಕಟ್ಟೆಗೆ ಧಾವಿಸುವವರ ಸಂಖ್ಯೆ ಒಂದೇ ಸಮನೆ ಹೆಚ್ಚಾಯಿತು.

ಹೈಸ್ಕೂಲ್‌ ಮೈದಾನದಲ್ಲಿದ್ದ ಪಟಾಕಿ ಮಳಿಗೆಗಳಿಗೆ ಹಿಂದಿನಂತೆ ಜನ ಮುಗಿಬಿದ್ದಿಲ್ಲ. ಆದರೆ ಇತಿಮಿತಿಯಲ್ಲಿ ಪಟಾಕಿ ಇರಲಿ ಎಂದು ಜನರು ಬಂದು ಖರೀದಿಸುತ್ತಿದ್ದರು.

ADVERTISEMENT

ಏರಿದ ಬೆಲೆ: ಎಲ್ಲ ಹಣ್ಣುಗಳಿಗೆ ಹಬ್ಬದ ಪ್ರಯುಕ್ತ ₹ 20ರಿಂದ ₹ 50ರಷ್ಟು ಏರಿಕೆಯಾಗಿತ್ತು. ಬಾಳೆಹಣ್ಣು ಡಜನ್‍ಗೆ ₹ 55ರಿಂದ 65, ದಾಳಿಂಬೆ ₹ 210, ಸೇಬು ₹ 150, ಸ‍ಪೋಟ ₹ 80, ದ್ರಾಕ್ಷಿ ₹ 200–220ರಂತೆ ಖರೀದಿ ನಡೆಯಿತು.

ಚೆಂಡು ಹೂವು, ಸೇವಂತಿಗೆ, ಮಲ್ಲಿಗೆ ಕನಕಾಂಬರ ಹೂವುಗಳಿಗೆ ಮಾರಿಗೆ ₹ 80ರಿಂದ ₹ 100ರ ವರೆಗೆ ದರ ಇತ್ತು. ಸಣ್ಣ ಬಿಡಿ ಗುಲಾಬಿ ಹೂವು ಕೆ.ಜಿಗೆ ₹ 320 ಇದ್ದು, ಜನ ಕಾಲು ಕೆ.ಜಿ.ಯಷ್ಟು ಖರೀದಿ ಮಾಡುತ್ತಿದ್ದರು.

ಪೂಜಾ ಸಾಮಗ್ರಿ ದರ: ವಿಶೇಷವಾಗಿ ಹಟ್ಟಿಲಕ್ಕಮ್ಮನ ಪೂಜೆಗಾಗಿ ಜನರು ಬಳಸುವ ಕಾಚಿ ಕಡ್ಡಿ, ಮಾವಿನಸೊಪ್ಪು, ಆನೆಪಟ್ಟಿ ಸಣ್ಣ ಕಟ್ಟು ಒಂದಕ್ಕೆ ₹ 10ರಿಂದ ₹ 20, ಉತ್ರಾಣಿ ಕಡ್ಡಿ 4 ಕಟ್ಟಿಗೆ ₹ 20, ಬಾಳೆಕಂದು ಜೋಡಿಗೆ ₹ 20, ಕುಂಬಳಕಾಯಿ ₹ 100ರವರೆಗೆ ಮಾರಾಟ ಮಾಡಲಾಯಿತು. ರಂಗೋಲಿ ಬಿಳಿಹುಡಿ ಒಂದು ಪ್ಯಾಕೆಟ್‌ಗೆ ₹ 10, ಬಣ್ಣಬಣ್ಣದ ಹುಡಿ ಪ್ಯಾಕೆಟ್‌ಗೆ ₹ 50ರಂತೆ ದರ ಇತ್ತು. ಮಣ್ಣಿನ ಹಣತೆಗೆ ಡಜನ್‌ಗೆ ₹ 50 ಇದ್ದರೆ, ಬೇರೆ ಹಣತೆ ಡಜನ್‌ಗೆ ₹ 100ಕ್ಕೆ ಮಾರಾಟವಾಗುತ್ತಿತ್ತು.

ಹಳೇ ದಾವಣಗೆರೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸಹಿತ ವಿವಿಧೆಡೆ ಮಾರುಕಟ್ಟೆ ಜೋರಾಗಿ ನಡೆಯಿತು. ಬಣ್ಣಬಣ್ಣದ ಗೂಡುದೀಪಗಳು ಗ್ರಾಹಕರ ಕೈಸೇರಿದವು.

‘ಹಿಂದೆ ಆಚರಿಸಿದಷ್ಟು ಸಂಭ್ರಮದಿಂದ ಈ ಬಾರಿ ದೀಪಾವಳಿ ಮಾಡಲು ಕೊರೊನಾ ಅಡ್ಡಿಯಾಗಿದೆ. ದುಡ್ಡು ಕೂಡ ಇಲ್ಲ. ಹಾಗಂತ ಹಬ್ಬ ಆಚರಿಸದೇ ಬಿಡಲು ಆಗುವುದಿಲ್ಲ. ಅದಕ್ಕಾಗಿ ಸ್ವಲ್ಪ ಹೂವು, ಹಣ್ಣು, ಪಟಾಕಿ ಒಯ್ಯಲು ಬಂದಿದ್ದೇವೆ’ ಎಂದು ಜಯನಗರ ಶ್ರೀನಿವಾಸ್ ತಿಳಿಸಿದರು.

‘ವ್ಯಾಪಾರ ಇದೆ. ಆದರೆ ತುಂಬಾ ಲಾಭ ಏನು ಇಲ್ಲ. ಹಬ್ಬ ಆಗಿರುವುದರಿಂದ ಬೇರೆ ಸಮಯಕ್ಕಿಂತ ಸ್ವಲ್ಪ ದರ ಹೆಚ್ಚಿದೆ. ಬಹಳ ಹೆಚ್ಚು ಮಾಡಿದರೆ ಜನ ಒಯ್ಯುವುದಿಲ್ಲ’ ಎಂದು ವ್ಯಾಪಾರಿ ಜಾಲಿನಗರದ ಮಾರುತಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.