ಬಸವಂತಪ್ಪ
ದಾವಣಗೆರೆ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ ಆಧಾರದ ಮೇರೆಗೆ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಕಾಯಮಾತಿಗೆ ಸರ್ಕಾರ ಮುಂದಾಗುತ್ತಿದ್ದಂತೆ ಲಂಚಾವತಾರ ಕಾಣಿಸಿಕೊಂಡಿದೆ. ಪ್ರತಿಯೊಬ್ಬರಿಗೆ ₹ 3 ಲಕ್ಷದಿಂದ ₹ 5 ಲಕ್ಷ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ದಾವಣಗೆರೆ ಮಹಾನಗರ ಪಾಲಿಕೆಯ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಅವರು ಈ ವಿಚಾರ ಪ್ರಸ್ತಾಪಿಸಿದರು.
‘ಪೌರಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಿ ಮೇ 1ಕ್ಕೆ ಆದೇಶ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇದರಿಂದ ಖುಷಿಪಡಬೇಕೊ, ದುಃಖಪಡಬೇಕೊ ಗೊತ್ತಾಗುತ್ತಿಲ್ಲ. ಲಂಚ ನೀಡುವಂತೆ ಪೌರಕಾರ್ಮಿಕರನ್ನು ಪೀಡಿಸಲಾಗುತ್ತಿದೆ. ಇದು ಅಧಿಕಾರಿಗಳ ಕೃತ್ಯವೊ ಅಥವಾ ಬೇರೆ ಯಾವುದಾದರೂ ಒತ್ತಡ ಇದೆಯೊ ಎಂಬುದರ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವ ಅಗತ್ಯವಿದೆ’ ಎಂದು ಹೇಳಿದರು.
‘ದಿನಗೂಲಿ ಆಧಾರದ ನೇಮಕಾತಿ ಸಂದರ್ಭದಲ್ಲಿಯೂ ಪೌರಕಾರ್ಮಿಕರಿಂದ ಲಕ್ಷಾಂತರ ರೂಪಾಯಿ ಲಂಚ ವಸೂಲಿ ಮಾಡಲಾಗಿದೆ. ಕಾಯಮಾತಿ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಪೌರಕಾರ್ಮಿಕರು ಶೇ 10ರ ಬಡ್ಡಿದರದಲ್ಲಿ ಸಾಲ ಪಡೆಯುತ್ತಿದ್ದಾರೆ. ಮಹಿಳಾ ಪೌರಕಾರ್ಮಿಕರ ಕೊರಳಲ್ಲಿ ತಾಳಿ, ಮುಖದಲ್ಲಿ ಮೂಗುಬೊಟ್ಟು ಕಾಣುತ್ತಿಲ್ಲ. ಒಮ್ಮೆ ಇವರನ್ನು ನೋಡಿ’ ಎಂದು ದಾವಣಗೆರೆ ಮಹಾನಗರ ಪಾಲಿಕೆಯ ಪೌರಾಯುಕ್ತೆ ರೇಣುಕಾ ಅವರನ್ನು ಉದ್ದೇಶಿಸಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.