ADVERTISEMENT

ಶಿಕ್ಷಕಿ ಡಿಜಿಟಲ್‌ ಅರೆಸ್ಟ್‌: ₹ 22.40 ಲಕ್ಷ ಸುಲಿಗೆ; ಕಾರು ಚಾಲಕನ ಬಂಧನ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 5:32 IST
Last Updated 29 ಆಗಸ್ಟ್ 2025, 5:32 IST
<div class="paragraphs"><p>ಚಿತ್ರ ಕೃಪೆ: ಪ್ರಾತಿನಿಧಕ ಚಿತ್ರ</p></div>

ಚಿತ್ರ ಕೃಪೆ: ಪ್ರಾತಿನಿಧಕ ಚಿತ್ರ

   

ದಾವಣಗೆರೆ: ಡಿಜಿಟಲ್ ಅರೆಸ್ಟ್‌ ಹೆಸರಿನಲ್ಲಿ ಶಿಕ್ಷಕಿಯೊಬ್ಬರಿಗೆ ₹ 22.40 ಲಕ್ಷ ಸುಲಿಗೆ ಮಾಡಿದ್ದ ಆರೋಪದಲ್ಲಿ ‘ಸೆನ್’ (ಆರ್ಥಿಕ, ಸೈಬರ್ ಹಾಗೂ ಮಾದಕವಸ್ತು ಅಪರಾಧ) ಠಾಣೆಯ ಪೊಲೀಸರು ಹಾಸನ ಜಿಲ್ಲೆಯ ಕಾರು ಚಾಲಕನೊಬ್ಬನನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಬೇಲೂರು ತಾಲ್ಲೂಕಿನ ಕೊರಟಿಕೆರೆ ಗ್ರಾಮದ ಅರುಣ್ ಕುಮಾರ್ (35) ಬಂಧಿತ.

ADVERTISEMENT

ಫೆ.5ರಂದು ದಾವಣಗೆರೆಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿಗೆ ದೂರವಾಣಿ ಕರೆ ಮಾಡಿದ್ದ ಆರೋಪಿಗಳು ಕೊರಿಯರ್ ಸಂಸ್ಥೆಯ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದರು.‌ ‘ನಿಮ್ಮ ಹೆಸರಿನಿಂದ ದುಬೈಗೆ ಕಳುಹಿಸುತ್ತಿರುವ ಪಾರ್ಸಲ್‌ನಲ್ಲಿ‌ ಔಷಧಗಳ ಜತೆಗೆ ಮಾದಕವಸ್ತು ಪತ್ತೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು’ ಎಂದು ಬೆದರಿಸಿ ಆಧಾರ್ ಕಾರ್ಡ್‌ ಹಾಗೂ ಇ-ಮೇಲ್ ವಿಳಾಸ ಪಡೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೊ ಕಾಲ್ ಮಾಡಿದ್ದ ಮಹಿಳೆಯೊಬ್ಬರು ಡಿಸಿಪಿ ಎಂಬುದಾಗಿ ಪರಿಚಯಿಸಿಕೊಂಡು ಶಿಕ್ಷಕಿಯನ್ನು ಡಿಜಿಟಲ್ ಅರೆಸ್ಟ್‌ ಮಾಡಿದ್ದರು. ಹವಾಲಾ ಹಣ ವರ್ಗಾವಣೆಯಲ್ಲಿ ಬಂಧಿತನಾಗಿರುವ ಆರೋಪಿಯ ಬಳಿ ಬ್ಯಾಂಕ್ ಖಾತೆಯ ವಿವರ ಹಾಗೂ ಎಟಿಎಂ ಕಾರ್ಡ್ ಪತ್ತೆಯಾಗಿರುವುದಾಗಿ ಶಿಕ್ಷಕಿಯನ್ನು ಬೆದರಿಸಿದ್ದರು. ಬ್ಯಾಂಕ್ ಖಾತೆಯ ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಲು ₹ 22.40 ಲಕ್ಷಗಳನ್ನು ಅರುಣ್ ಕುಮಾರ್ ಹಾಗೂ ಇತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು’ ಎಂದು ಪೊಲೀಸರು ವಿವರಿಸಿದ್ದಾರೆ.

ಈ ಸಂಬಂಧ ಮಾರ್ಚ್ 12ರಂದು ಶಿಕ್ಷಕಿ ‘ಸೆನ್’ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಡಿವೈಎಸ್‌ಪಿ ಬಂಕಾಳಿ ನಾಗಪ್ಪ ನೇತೃತ್ವದ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.