ಹಿರಿಯೂರು: ‘ಬುಡಕಟ್ಟು ಜನಾಂಗಕ್ಕೆ ಸೇರಿರುವ ಕಾಡುಗೊಲ್ಲ ಸಮುದಾಯದ ಜನಪದ ಉತ್ಸವ, ಆಚರಣೆಗಳು ಕಣ್ಮರೆಯಾಗುತ್ತಿರುವುದು ಆತಂಕದ ವಿಚಾರ. ಭವಿಷ್ಯದ ಪೀಳಿಗೆಗೆ ಅವನ್ನು ಉಳಿಸಿ ಬೆಳೆಸಬೇಕಿದೆ’ ಎಂದು ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿ. ಶಿವು ಯಾದವ್ ಹೇಳಿದರು.
ತಾಲ್ಲೂಕಿನ ಮ್ಯಾಕ್ಲೂರಹಳ್ಳಿಯಲ್ಲಿ ‘ಕಾಡುಗೊಲ್ಲರ ಜನಪದ ಸೊಗಡು’ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾಡುಗೊಲ್ಲ ಸಮ್ಮೇಳನ ಹಾಗೂ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಒಬ್ಬರಿಂದ ಒಬ್ಬರಿಗೆ ಬೆಳೆದುಕೊಂಡು ಬಂದಿರುವ ಜನಪದದ ಸೊಗಡನ್ನು ಹಟ್ಟಿಗಳಲ್ಲಿ ನಡೆಯುತ್ತಿದ್ದ ಮದುವೆ, ನಾಮಕರಣ, ಹಬ್ಬ ಹರಿದಿನಗಳಲ್ಲಿ ಹಾಡುವ ಸೋಬಾನೆ ಪದಗಳಲ್ಲಿ, ದೇವರ ಉತ್ಸವದ ಸಮಯದಲ್ಲಿ ಕುಣಿಯುತ್ತಿದ್ದ ಕೋಲಾಟದ ಪದಗಳಲ್ಲಿ, ಭಜನೆಗಳಲ್ಲಿ ಆಸ್ವಾದಿಸುತ್ತಿದ್ದೆವು. ಆಧುನಿಕತೆಯ ಭರಾಟೆಯಲ್ಲಿ ಇವೆಲ್ಲವೂ ನಮ್ಮ ಗೊಲ್ಲರಹಟ್ಟಿಗಳಲ್ಲಿ ಕಣ್ಮರೆಯಾಗಿವೆ. ನಮ್ಮ ಯುವಕರು ಶಿಕ್ಷಣದ ಜೊತೆಗೆ ಜನಪದದ ಬಗೆಗೂ ತಿಳಿದುಕೊಂಡು ಸಂಸ್ಕೃತಿಯ ವಿಶಿಷ್ಟತೆಯನ್ನು ಉಳಿಸಬೇಕು’ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್, ನಿಸರ್ಗ ಗೋವಿಂದರಾಜು, ನಿವೃತ್ತ ಪ್ರಾಂಶುಪಾಲ ನಾಗೇಂದ್ರಯ್ಯ, ಮಸ್ಕಲ್ ಪೂಜಾರಿ ಚಿತ್ತಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಕರಿಯಣ್ಣ, ರಂಗಯ್ಯ, ಎಸ್. ತಿಮ್ಮಯ್ಯ, ಮಂಜುನಾಥ್, ಶಶಿ, ಪ್ರವೀಣ್ ಕುಮಾರ್, ಮೋಹನ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಡುಗೊಲ್ಲ ಜನಪದ ಸೊಗಡು ಲೋಗೋ ಬಿಡುಗಡೆ ಮಾಡಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ಪಿ.ಆರ್. ರಂಗಸ್ವಾಮಿ ಅವರನ್ನು ಗೌರವಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.