ADVERTISEMENT

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಫೇಸ್‌ಬುಕ್ ಖಾತೆ ಹ್ಯಾಕ್‌

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 16:54 IST
Last Updated 18 ಜೂನ್ 2021, 16:54 IST

ದಾವಣಗೆರೆ:ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್ ಅವರ ಫೇಸ್‌ಬುಕ್ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿ, ಅವರ ಸ್ನೇಹಿತರಿಗೆ ಹಣ ಹಾಕುವಂತೆ ಸಂದೇಶ ಕಳುಹಿಸಿದ್ದಾರೆ. ಈ ಕುರಿತು ಸೈಬರ್‌ ಅಪರಾಧ ಠಾಣೆಗೆ ದೂರು ನೀಡಿರುವ ಡಾ. ರಾಘವನ್‌ ನಕಲಿ ಖಾತೆಯನ್ನು ಡಿಲೀಟ್‌ ಮಾಡಿಸಿದ್ದಾರೆ.

ಡಾ. ರಾಘವನ್ ಅವರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿದ್ದ ದುಷ್ಕರ್ಮಿಗಳು, ಅಧಿಕೃತ ಖಾತೆಯಲ್ಲಿರುವ ಫೋಟೋ ತೆಗೆದುಕೊಂಡು ರಾಘವನ್ ಗುನ್ನಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿದ್ದರು. ಅಲ್ಲದೇ ಅವರ 53ಕ್ಕೂ ಹೆಚ್ಚು ಸ್ನೇಹಿತರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ, 20ಕ್ಕೂ ಹೆಚ್ಚು ಜನರಿಂದ ಹಣ ಹಾಕುವಂತೆ ಕೇಳಿದ್ದರು.

ಸಂದೇಶವನ್ನು ಸ್ವೀಕರಿಸಿದವರಿಗೆ ನೀವು ಫೋನ್ ಪೇ, ಗೂಗಲ್‌ಪೇ, ಪೇಟಿಎಂ ಬಳಸುತ್ತಿದ್ದೀರಾ ಎಂಬುದಾಗಿ ವಿಚಾರಿಸಿದ್ದಾರೆ. ಇವ್ಯಾವುದನ್ನು ಬಳಸುವುದಿಲ್ಲ ಎನ್ನುವವರ ಮೇಸೆಂಜರ್ ಅನ್ನು ಅನ್ ಬ್ಯಾಕ್ ಮಾಡಿ ಬಳಸುತ್ತಿದ್ದೇವೆಂದು ಹೇಳಿದವರ ಬಳಿ ಹಣ ಪಾವತಿಸುವಂತೆ ಕೇಳಿದ್ದರು.

ADVERTISEMENT

ತಮ್ಮ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದಿರುವುದು ಸ್ನೇಹಿತರಿಂದ ಗಮನಕ್ಕೆ ಬಂದ ತಕ್ಷಣ ಡಾ.ರಾಘವನ್ ಸೈಬರ್‌ ಅಪರಾಧ ಠಾಣೆ ಪೊಲೀಸರನ್ನು ಸಂಪರ್ಕಿಸಿ, ನಕಲಿ ಖಾತೆಯನ್ನು ಡಿಲೀಟ್‌ ಮಾಡಿಸಿದ್ದಾರೆ.

‘ಎರಡು ದಿನಗಳಿಂದ ಫೇಸ್‌ಬುಕ್‌ ಖಾತೆ ಓಪನ್‌ ಆಗುತ್ತಿರಲಿಲ್ಲ. ಆಸ್ಪತ್ರೆಯ ಒಬ್ಬ ಗುತ್ತಿಗೆ ನೌಕರರು ಸರ್‌ ನೀವು ಯಾವತ್ತೂ ಹಣ ಕೇಳಿಲ್ಲ. ಕಷ್ಟದಲ್ಲಿದ್ದೀರಾ ಹಣ ಹಾಕಲಾ ಎಂದು ಕೇಳಿದರು. ನನಗೆ ಆಶ್ಚರ್ಯವಾಗಿ ಕೇಳಿದಾಗ ಖಾತೆಯಿಂದ ಸಂದೇಶ ಬಂದಿದ್ದನ್ನು ತಿಳಿಸಿದರು. ಹಲವು ಸ್ನೇಹಿತರೂ ಕರೆ ಮಾಡಿ ಖಾತೆ ಹ್ಯಾಕ್‌ ಆಗಿರುವ ಬಗ್ಗೆ ತಿಳಿಸಿದರು. ಬಳಿಕ ಸೈಬರ್‌ ಅಪರಾಧ ಪೊಲೀಸರಿಗೆ ದೂರು ನೀಡಿ ನಕಲಿ ಖಾತೆ ಡಿಲೀಟ್‌ ಮಾಡಿಸಿದ್ದೇನೆ’ ಎಂದುಡಾ. ಜಿ.ಡಿ. ರಾಘವನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.