ADVERTISEMENT

ಸಂತ ಸೇವಾಲಾಲ್ ಜಯಂತಿ: ಬೆದರಿಕೆಗೆ ಜಗ್ಗುವ ಮಗ ನಾನಲ್ಲ; ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 13:16 IST
Last Updated 14 ಫೆಬ್ರುವರಿ 2026, 13:16 IST
<div class="paragraphs"><p>ಡಿ.ಕೆ.ಶಿವಕುಮಾರ್</p></div>

ಡಿ.ಕೆ.ಶಿವಕುಮಾರ್

   

ಸೂರಗೊಂಡನಕೊಪ್ಪ (ದಾವಣಗೆರೆ): ‘ನಾನು ವೇದಿಕೆಗೆ ಬಂದಾಗ ಕೆಲ ಯುವಕರು ಕಿರುಚಾಡಿದರು. ಇಂತಹ ಬೆದರಿಕೆಗಳಿಗೆ ಜಗ್ಗುವ ಮಗ ನಾನಲ್ಲ. ಕೆಲವರು ಗೋಬ್ಯಾಕ್ ಅಂತ ಘೋಷಣೆ ಕೂಗಬಹುದು. ಆದರೆ, ಕಂಬ್ಯಾಕ್ ಅಂತ ನಿಲ್ಲುವ ಜನರೂ ಜೊತೆಗಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾರ್ಮಿಕವಾಗಿ ನುಡಿದರು.

ಇಲ್ಲಿನ ಭಾಯಗಡದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಹಾಗೂ ಸಂತ ಸೇವಾಲಾಲ್ ಮಹಾಮಠ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಂತ ಸೇವಾಲಾಲ್ ಅವರ 287ನೇ ಜಯಂತಿಯಲ್ಲಿ ಅವರು ಮಾತನಾಡಿದರು.

ADVERTISEMENT

‘ನನ್ನ ಬೆಂಬಲಿಸಿದ ಜನರ ಜೊತೆಗೆ ಇದ್ದೇನೆ ಎಂಬುದನ್ನು ಹೇಳಲು ಇಲ್ಲಿಗೆ ಬಂದಿದ್ದೇನೆ. ನನ್ನ ತತ್ವ, ನಿಷ್ಠೆ, ಸಿದ್ಧಾಂತ ನಿಮಗೆ ಗೊತ್ತಿಲ್ಲ. ಬಂಜಾರ ಸಮುದಾಯಕ್ಕೆ ಅನ್ಯಾಯ ಆಗುತ್ತಿದ್ದಾಗ ಜೊತೆಗೆ ನಿಂತವನು ನಾನು ಮಾತ್ರ. ಹೋರಾಟ ಮಾಡುವುದು ತಪ್ಪಲ್ಲ, ಧಾರ್ಮಿಕ ಸಭೆಯಲ್ಲಿ ಗಲಾಟೆ ಮಾಡುವುದರಿಂದ ಪ್ರಯೋಜನ ಆಗುವುದಿಲ್ಲ’ ಎಂದು ಹೇಳಿದರು.

‘ಕೆ.ಟಿ. ರಾಥೋಡ್ ಅವರ ಕಾಲದಲ್ಲಿ ಬಂಜಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಅನುಕೂಲ ಮಾಡಿಕೊಟ್ಟಿದ್ದು ಕಾಂಗ್ರೆಸ್. ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ನಂಬಿದವನು ನಾನು. ರಾಜಕಾರಣ ಮಾಡಲು ಬೇರೆ ವೇದಿಕೆ ಇದೆ’ ಎಂದು ಹೇಳಿದರು.

​‘ಇದೊಂದು ಪವಿತ್ರ ಕಾರ್ಯಕ್ರಮ. ಸೇವಾಲಾಲ್ ಅವರು ಜೀವನ ಪರ್ಯಂತ ಸತ್ಯ, ನಿಷ್ಠೆ, ಸಾಮರಸ್ಯ, ಸೌಹಾರ್ದ ಸಂದೇಶ ಸಾರಿದ್ದಾರೆ. ಮನುಷ್ಯನಿಗೆ ಧರ್ಮ ಬೇಕು. ಧರ್ಮಕ್ಕೆ ದಯೆ ಇರಬೇಕು. ಧರ್ಮ ಯಾವುದಾದರೂ ತತ್ವ ಒಂದೇ, ದೇವನೊಬ್ಬ ನಾಮ ಹಲವು. ಇದರಲ್ಲಿ ನಂಬಿಕೆ ಇಟ್ಟುಕೊಂಡು ಬದುಕುತ್ತಿದ್ದೇನೆ’ ಎಂದು ಹೇಳಿದರು.

​ಸಣ್ಣ ನೀರಾವರಿ ಸಚಿವ ಬೋಸರಾಜು, ಪಶುಸಂಗೋಪನಾ ಸಚಿವ ಮಂಕಾಳ ವೈದ್ಯ, ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಬಿ.ವೈ. ರಾಘವೇಂದ್ರ, ಶಾಸಕರಾದ ಡಿ.ಜಿ. ಶಾಂತನಗೌಡ, ಬಿ.ಪಿ. ಹರೀಶ್, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ, ವಿಧಾನಪರಿಷತ್ ಸದಸ್ಯೆ ಜಲಜಾ ನಾಯ್ಕ, ಮಾಜಿ ಶಾಸಕ ಪಿ.ರಾಜೀವ್, ಬಸವರಾಜ ನಾಯ್ಕ, ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾನಾಯ್ಕ, ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೋಜಿರಾವ್, ಭೋಜಾನಾಯ್ಕ ಹಾಜರಿದ್ದರು

ಮನಸಿನಲ್ಲಿರುವ ಅಸಮಾಧಾನ ಹೊರಹಾಕುವ ವೇದಿಕೆ ಇದಲ್ಲ. ಸೇವಾಲಾಲ್ ಮಹಾರಾಜರು ಶಾಂತಿ ಸಂಕೇತವಾಗಿದ್ದರು. ಬಂಜಾರ ಸಮುದಾಯಕ್ಕೆ ಸಮಾಧಾನ ಅತಿ ಮುಖ್ಯ.
ಟಿ. ವೆಂಕಟೇಶ ನಾಯ್ಕ, ಹೈಕೋರ್ಟ್ ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.