ದಾವಣಗೆರೆ: ಅನ್ನದಾನ, ವಿದ್ಯಾದಾನಗಳಂತೆಯೇ ರಕ್ತದಾನವೂ ಶ್ರೇಷ್ಠವಾದದು. ಆರೋಗ್ಯವಂತ ಮನುಷ್ಯ ರಕ್ತದಾನ ಮಾಡುವುದರಿಂದ ಅಮೂಲ್ಯ ಜೀವಗಳನ್ನು ಉಳಿಸಬಹುದು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.
ಎಸ್.ಎಸ್ ಮಲ್ಲಿಕಾರ್ಜುನ ಅವರ 55ನೇ ಜನ್ಮದಿನದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಬೃಹತ್ ರಕ್ತದಾನ ಅಭಿಯಾನದಲ್ಲಿ ಸಂಗ್ರಹಿಸಿರುವ ರಕ್ತ ಕಣಗಳ ಯೂನಿಟ್ನ್ ಅನ್ನು ಮಂಗಳವಾರ ಅರ್ಹ ರೋಗಿಗಳ ಸಂಬಂಧಿಕರಿಗೆ ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರತಿ ತಿಂಗಳು 800-900 ಜನರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಪ್ರತಿ ತಿಂಗಳು 500ರಿಂದ 600 ಮಂದಿ ರಕ್ತದಾನ ಮಾಡುತ್ತಿದ್ದಾರೆ. ಇದರಿಂದ ಅವಶ್ಯಕತೆ ಇರುವ ಹಲವರಿಗೆ ರಕ್ತ ಸಿಗದೇ ಸಮಸ್ಯೆ ಎದುರಾಗುತ್ತಿದೆ ಎಂದು ಮಾಹಿತಿ ನೀಡಿದರು.
ಎಸ್.ಎಸ್.ಎಂ ಅಭಿಮಾನಿ ಬಳಗವು ಜಿಲ್ಲೆಯಾದ್ಯಂತ ಬೃಹತ್ ರಕ್ತದಾನ ಅಭಿಯಾನ ಹಮ್ಮಿಕೊಂಡಿದೆ. 5555 ಯುನಿಟ್ ರಕ್ತ ಸಂಗ್ರಹದ ದಾಖಲೆಯ ಯೋಜನೆ ರೂಪಿಸಲಾಗಿದೆ. ಸಂಗ್ರಹವಾಗುವ ರಕ್ತವನ್ನು ಅವಶ್ಯಕತೆ ಇರುವವರಿಗೆ ಉಚಿತವಾಗಿ ನೀಡಲು ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನಿರ್ಧರಿಸಿದ್ದಾರೆ ಎಂದು ವಿವರಿಸಿದರು.
ಇವತ್ತು ಐವರಿಗೆ ಕೆಂಪುರಕ್ತ ಕಣ ಹಾಗೂ ಇಬ್ಬರಿಗೆ ಬಿಳಿ ರಕ್ತ ಕಣದ ಯೂನಿಟ್ಗಳನ್ನು ನೀಡಲಾಗಿದೆ ಎಂದು ಬಾಪೂಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಸ್.ಕುಮಾರ್ ತಿಳಿಸಿದರು.
ಇದೇ ವೇಳೆ ಚರ್ಮರೋಗ ತಜ್ಞ ಡಾ. ರಾಜಶೇಖರ್ ನಾಡಿಗ್ ರಕ್ತದಾನ ಮಾಡಿದರು. ಈ ಬೃಹತ್ ರಕ್ತದಾನ ಅಭಿಯಾನಕ್ಕೆ ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬಾಪೂಜಿ ಆಸ್ಪತ್ರೆ, ಬಾಪೂಜಿ ರಕ್ತ ನಿಧಿ ಕೇಂದ್ರ ಹಾಗೂ ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಎಸ್.ಎಸ್. ಆಸ್ಪತ್ರೆ ಮತ್ತು ಎಸ್.ಎಸ್. ರಕ್ತ ನಿಧಿ ಕೇಂದ್ರ ಕೈಜೋಡಿಸಿದೆ.
ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಬಿ. ಮುರುಗೇಶ್, ಬಾಪೂಜಿ ರಕ್ತ ನಿಧಿ ಕೇಂದ್ರದ ಜಗದೀಶ್ವರಿ, ಡಾ. ನಿಕೇತನ್, ವರದರಾಜ್ ಕುಲಕರ್ಣಿ ಹಾಗೂ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.