ದಾವಣಗೆರೆ: ಜಿಲ್ಲೆಯ ವಿವಿಧ ತಾಂಡಾಗಳಲ್ಲಿ ಕೊರೊನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ನಿದರ್ಶನಗಳು ಕಂಡುಬರುತ್ತಿವೆ.
‘ಲಸಿಕೆ ಪಡೆದರೆ ನಪುಂಸಕರಾಗಿ ಅವರಿಗೆ ಮಕ್ಕಳಾಗುವುದಿಲ್ಲ, ಎರಡು ವರ್ಷಗಳಿಗೆ ಸಾಯುತ್ತಾರೆ.ನಾವು ಲಸಿಕೆ ತೆಗೆದುಕೊಳ್ಳದೇ ಇದ್ದರೂ ಚೆನ್ನಾಗಿರುತ್ತೇವೆ ಎಂಬ ಮೌಢ್ಯ ತಾಂಡಾದ ಜನರಲ್ಲಿ ಬೇರೂರಿರುವುದರಿಂದ ಕೊರೊನಾ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ’ ಎನ್ನುತ್ತಾರೆ ಕೆಪಿಸಿಸಿ ಎಸ್ಸಿ ವಿಭಾಗದ ರಾಜ್ಯ ಉಪಾಧ್ಯಕ್ಷ ಎಚ್. ನಾಗರಾಜ.
‘ಜಿಲ್ಲೆಯ ವಿವಿಧ ತಾಂಡಾಗಳಲ್ಲಿ 4 ಲಕ್ಷ ಜನಸಂಖ್ಯೆ ಇದ್ದು, ವೈದ್ಯರು, ಸರ್ಕಾರಿ ನೌಕರರು, ಶಿಕ್ಷಕರು, ಎಂಜಿನಿಯರ್ಗಳು ಹಾಗೂ ರಾಜಕೀಯ ವ್ಯಕ್ತಿಗಳು ಸೇರಿ ವಿದ್ಯಾವಂತರಷ್ಟೇ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಆದರೆ ತಾಂಡಾದ ಒಳಗಡೆ ಇರುವ ಜನರಿಗೆ ತಿಳಿವಳಿಕೆ ಮೂಡಿಲ್ಲ’ ಎಂಬುದು ಅವರ ವಿವರಣೆ.
‘ಚನ್ನಗಿರಿ ತಾಲ್ಲೂಕಿನಲ್ಲಿ 52, ಮಾಯಕೊಂಡ–43, ಹರಪನಹಳ್ಳಿಯಲ್ಲಿ 80 ದಾವಣಗೆರೆ ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ 1ಲಕ್ಷ, ಹೊನ್ನಾಳಿ ತಾಲ್ಲೂಕಿನಲ್ಲಿ 58, ಹರಿಹರ ತಾಲ್ಲೂಕಿನಲ್ಲಿ 42 ತಾಂಡಾಗಳು ಇವೆ. ಈ ತಾಂಡಾಗಳಿಂದ ಕೂಲಿಗಾಗಿ ಬೆಂಗಳೂರು, ಗೋವಾ, ಚಿಕ್ಕಮಗಳೂರು ಭಾಗಗಳಲ್ಲಿ ಕಾಫಿ ಎಸ್ಟೇಟ್ಗಳಿಗೆ ದುಡಿಮೆ ಮಾಡಿ ಲಾಕ್ಡೌನ್ ವೇಳೆ ಹಿಂತಿರುಗಿದ್ದಾರೆ. ಇದರಿಂದಾಗಿ ಕೊರೊನಾ ಹೆಚ್ಚಾಗಿ ಕಾಣಿಸಿಕೊಂಡಿದೆ’ ಎಂಬುದು ಅವರ ವಾದ.
‘ಚನ್ನಗಿರಿ ತಾಲ್ಲೂಕಿನ 8, ಕಬ್ಬಳದಲ್ಲಿ 9, ಕರೆಕಟ್ಟೆಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಹಲವು ತಾಂಡಾಗಳಲ್ಲಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. ತಜ್ಞರು ಮೂರನೇ ಅಲೆಯ ಎಚ್ಚರಿಕೆ ನೀಡಿದರೂ ತಾಂಡಾಗಳಲ್ಲಿ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ನಾಗರಾಜ ಹೇಳುತ್ತಾರೆ.
ಕೊರೊನಾ ಜಾಗೃತಿ: ತಾಂಡಾಗಳಲ್ಲಿ ಲಸಿಕೆ ಬಗ್ಗೆ ಇರುವ ಮೌಢ್ಯವನ್ನು ದೂರ ಮಾಡುವ ನಿಟ್ಟಿನಲ್ಲಿ ಮಾಯಕೊಂಡ ಕ್ಷೇತ್ರದ ಬಸವಾಪಟ್ಟಣ ಹೋಬಳಿಯ ಹೊಸನಗರ ತಾಂಡಾಗಳಲ್ಲಿ ಜಾಗೃತಿ ಮೂಡಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.