ಉಚ್ಚಂಗಿದುರ್ಗ: ಇಲ್ಲಿನ ಪುಣಭಗಟ್ಟ ಗ್ರಾಮದ ಕಾಯ್ದಿಟ್ಟ ಅರಣ್ಯದಲ್ಲಿ ಮಂಗಳವಾರ ಸಂಜೆ ಬೆಂಕಿ ಕಾಣಿಸಿಕೊಂಡು, 20ಕ್ಕೂ ಅಧಿಕ ಎಕರೆಯಲ್ಲಿನ ಗಿಡ–ಮರಗಳು ಸುಟ್ಟುಹೋಗಿವೆ.
ಸಂಜೆ 4ರ ಸುಮಾರಿಗೆ ಅರಣ್ಯದಲ್ಲಿ ಬೆಂಕಿ ಕಾಣಸಿಕೊಂಡಿದೆ. ಸ್ಥಳೀಯರ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ದಾವಣಗೆರೆ ಅಗ್ನಿಶಾಮಕದಳದ ಸಿಬ್ಬಂದಿ, ನಾಗರಿಕರ ಸಹಕಾರದೊಂದಿಗೆ ಬೆಂಕಿ ನಂದಿಸಲು ಯತ್ನಿಸಿದರು. ಬೆಂಕಿಯ ತೀವ್ರತೆ ಹೆಚ್ಚಿದ ಹಿನ್ನೆಲೆಯಲ್ಲಿ ಹರಪನಹಳ್ಳಿ ಅಗ್ನಿಶಾಮಕ ದಳದ ಸಿಬ್ಬಂದಿಯೂ ಬಂದು ಬೆಂಕಿ ನಂದಿಸಲು ಮುಂದಾದರು.
‘ಅರಣ್ಯ ಪ್ರದೇಶದಲ್ಲಿ ಅಗ್ನಿಶಾಮಕ ವಾಹನ ಚಲಿಸಲು ದಾರಿ ಇಲ್ಲದಿರುವುದರಿಂದ 10ಕ್ಕೂ ಹೆಚ್ಚು ಸಿಬ್ಬಂದಿ ಹಸಿರು ತಪ್ಪಲು ಹಿಡಿದು ಬೆಂಕಿ ನಂದಿಸಲು ಮುಂದಾಗಿದ್ದಾರೆ. ರಾತ್ರಿ 8 ಗಂಟೆಗೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ’ ಎಂದು ಹರಪನಹಳ್ಳಿ ಅಗ್ನಿಶಾಮಕ ಠಾಣಾಧಿಕಾರಿ ರಾಮಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಹುಲ್ಲು, ಸೊಪ್ಪು ಹಾಗೂ ಗಿಡಗಂಟಿಗಳ ದಟ್ಟಣೆ ನಿಯಂತ್ರಿಸಲು ಇಲಾಖೆಯಿಂದ ಬೆಂಕಿ ಹಾಕಲಾಗಿತ್ತು. ಇದರಿಂದ ಯಾವುದೇ ಹಾನಿ ಉಂಟಾಗಿಲ್ಲ’ ಎಂದು ವಲಯ ಅರಣ್ಯಾಧಿ ಕಾರಿ ಭರತ್ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.