ADVERTISEMENT

ತಳ ಸಮುದಾಯಗಳ ಬೆಸುಗೆಯ ಜೋಕುಮಾರಸ್ವಾಮಿ ಆಚರಣೆ

ಜನಪದ ಸಂಸ್ಕೃತಿ ಆಚರಣೆಗೆ ಜನಮನ್ನಣೆ

ಆರ್.ರಾಘವೇಂದ್ರರಾವ್
Published 15 ಸೆಪ್ಟೆಂಬರ್ 2021, 3:35 IST
Last Updated 15 ಸೆಪ್ಟೆಂಬರ್ 2021, 3:35 IST
ಹರಿಹರದ ಹಳ್ಳದಕೇರಿ ಸುಣಗಾರ ಬೀದಿಯಲ್ಲಿ ಜೋಕುಮಾರ ಸ್ವಾಮಿಯ ಪೂಜೆಯಲ್ಲಿ ತೊಡಗಿರುವ ಮಹಿಳೆಯರು.
ಹರಿಹರದ ಹಳ್ಳದಕೇರಿ ಸುಣಗಾರ ಬೀದಿಯಲ್ಲಿ ಜೋಕುಮಾರ ಸ್ವಾಮಿಯ ಪೂಜೆಯಲ್ಲಿ ತೊಡಗಿರುವ ಮಹಿಳೆಯರು.   

ಹರಿಹರ: ‘ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡಗಳೆಲ್ಲ ಹೈನಾಗಿ ಜೋಕುಮಾರ, ಜೋಕುಮಾರ... ಜೋಕುಮಾರ... ಮಡಿವಾಳ ಕೇರಿ ಹೊಕ್ಕಾನ ಜೋಕುಮಾರ ಮುಡಿತುಂಬಾ ಹೂವ ಮುಡಿದಂತ ಚೆಲುವಿ ತನ್ನ ಮಡಿಯಂದಾ ಜೋಕುಮಾರ’

- ಹೀಗೆ ತಮ್ಮ ಗಾನಕಂಠದಿಂದ ಸುಶ್ರಾವ್ಯವಾಗಿ ಹಾಡುತ್ತಾ ಜೋಕುಮಾರರನ್ನು ಆರಾಧಿಸುವ ಜನಪದಿಯರ ಹಬ್ಬ ಆರಂಭವಾಗಿದೆ.

ಭಾದ್ರಪದ ಅಷ್ಟಮಿಯ ದಿನದಿಂದ ಆರಂಭವಾಗುವ ಜೋಕುಮಾರಸ್ವಾಮಿ ಹಬ್ಬ, ಜನಪದ ಸಂಸ್ಕೃತಿಯ ವಿಶಿಷ್ಟ ಆಚರಣೆ. ಜೋಕುಮಾರನನ್ನು ಶ್ರದ್ಧಾ-ಭಕ್ತಿಯಿಂದ ಪೂಜಿಸಿದರೆ, ಮಳೆ-ಬೆಳೆ ಸಮೃದ್ಧಿಯಾಗಿ ಆಗುತ್ತದೆ ಎಂಬ ನಂಬಿಕೆ ಕೃಷಿಕರಲ್ಲಿ ಹಾಸುಹೊಕ್ಕಾಗಿದೆ.

ADVERTISEMENT

ಗಣೇಶ ಶಿಷ್ಟ ಸಂಸ್ಕೃತಿಯ ವಾರಸುದಾರನಾದರೆ, ಜೋಕುಮಾರಸ್ವಾಮಿ ಜನಪದ ಸಂಸ್ಕೃತಿಯ ಪ್ರತೀಕ. ಚತುರ್ಥಿಯ ನಂತರದ ಐದು ದಿನಗಳ ಕಾಲ, ಕಾಯಿ-ಕಡುಬಿನ ಭರ್ಜರಿ ಭೂರಿ ಭೋಜನ ಸವಿದ ಗಣೇಶ, ಭೂಲೋಕದಲ್ಲಿ ಎಲ್ಲವೂ ಸೌಖ್ಯವಾಗಿದೆ ಎಂದು ತನ್ನ ತಂದೆ-ತಾಯಿ, ಶಿವ-ಪಾರ್ವತಿಗೆ ವರದಿ ಒಪ್ಪಿಸಿದರೆ, ಜನಪದ ಸಂಸ್ಕೃತಿಯ ವಾರಸುದಾರನಾದ ಜೋಕುಮಾರ ಸ್ವಾಮಿ ಭೂಲೋಕದಲ್ಲಿ ಮಳೆ ಇಲ್ಲದೆ, ನರಮನುಷ್ಯ ಸಂಕಷ್ಟದಲ್ಲಿದ್ದಾನೆ. ಹನಿ ನೀರಿಗಾಗಿ ಪ್ರಾಣಿ-ಪಕ್ಷಿಗಳು ಪರಿತಪಿಸುತ್ತಿವೆ. ಮಳೆ ಸುರಿಯದಿದ್ದರೆ ಭೂಲೋಕ ನರಕಕೂಪವಾಗುತ್ತದೆ ಎಂದು ಜೀವಸಂಕುಲ ಅನುಭವಿಸುತ್ತಿರುವ ಕಷ್ಟಕಾರ್ಪಣ್ಯಗಳ ವರದಿ ಒಪ್ಪಿಸಿ ಮಳೆಗಾಗಿ ವಿನಂತಿಸುತ್ತಾನೆ ಎಂಬ ನಂಬಿಕೆ ಇದೆ.

ಜೋಕುಮಾರ ಗಂಗಾಮತ (ಬೆಸ್ತ) ಸಮುದಾಯದ ಮನೆಯಲ್ಲಿ ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಜನ್ಮ ತಾಳುತ್ತಾನೆ. ಗಂಗಾಮತ ಸಮಾಜದ ಕೆಂಚಮ್ಮ, ಮಂಜಕ್ಕ, ಸರೋಜಮ್ಮ, ಗದಿಗೆವ್ವ, ಶೈಲಾ, ಹನುಮಕ್ಕ, ಯಶೋಧ, ಹಾಗೂ ಇತರರು ಜೋಕುಮಾರನನ್ನು ತಲೆ ಮೇಲೆ ಹೊತ್ತು ಹಾಡು ಹಾಡುತ್ತಾ ಕಸಬಾ ಹೋಬಳಿಯಲ್ಲಿನ ಊರೂರು ಸುತ್ತುತ್ತಾರೆ.

ಮಣ್ಣಿನಿಂದ ತಯಾರಿಸಿದ ಮೂರ್ತಿಗೆ ಬೇವಿನ ಎಸಳುಗಳ ಉಡುಗೆಯೊಂದಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗುತ್ತದೆ. ಅಲಂಕೃತ ಮೂರ್ತಿಯನ್ನು ಮಹಿಳೆಯರು ಬುಟ್ಟಿಯಲ್ಲಿಟ್ಟುಕೊಂಡು ಆತನಿಗೆ ಸಂಬಂಧಿಸಿದ ಕತೆ-ಹಾಡುಗಳನ್ನು ಹಾಡುತ್ತಾ ಸಂಚರಿಸುತ್ತಾರೆ. ಈ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕು ಎಂಬುದು ಆರಾಧಕರು ಹಾಕಿಕೊಂಡಿರುವ ಸಂಪ್ರದಾಯ.

ಮನೆಮನೆಗೆ ತೆರಳಿದಾಗ ಭಕ್ತರು ನೀಡುವ ಜೋಳಕ್ಕೆ ಪ್ರತಿಯಾಗಿ ಜೋಕುಮಾರನ ಅರ್ಚಕರು ಕರಿಮಸಿ ಬೆರೆತ ಬೇವಿನ ಸೊಪ್ಪು, ಜೋಳ ಇತ್ಯಾದಿಗಳನ್ನು ಕೊಡುತ್ತಾರೆ. ಇದನ್ನು ಮಾರನೇ ದಿನ ಬೆಳಗಿನಜಾವ ಜೋಳದ ಪೈರಿಗೆ ಮಜ್ಜಿಗೆಯಲ್ಲಿ ಬೆರೆಯಿಸಿ ಚರಗ ಹೊಡೆಯುತ್ತಾರೆ. ಹೀಗೆ ಹೊಡೆಯುವುದರಿಂದ ಬೆಳೆ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಕೃಷಿಕರಲ್ಲಿದೆ.

ಏಳು ದಿನಗಳ ಸಂಪ್ರದಾಯಿಕ ವಿಧಿ-ವಿಧಾನಗಳು ಮುಗಿದ ನಂತರ ಪರಿಶಿಷ್ಟರ ಮನೆಯಲ್ಲಿ ಜೋಕುಮಾರನಿಗೆ ಚೂರಿ ಹಾಕುತ್ತಾರೆ. ನಂತರ ಬಟ್ಟೆ ತೊಳೆಯುವ ಮಡಿವಾಳರ ಬಂಡೆಯ ಅಡಿಯಲ್ಲಿ ಆತನ ಶವ ಹೂತು ಬರುತ್ತಾರೆ. ನಂತರ, ಮಡಿವಾಳ ಸಮಾಜದವರು ಜೋಕುಮಾರನ ಅಂತ್ಯ ಸಂಸ್ಕಾರ ನೇರವೇರಿಸುತ್ತಾರೆ. ಏಳು ದಿನಗಳ ಕಾಲ ಊರೂರು ಅಲೆದ ಸಂದರ್ಭದಲ್ಲಿ ಸಂಗ್ರಹವಾದ ದವಸ-ಧಾನ್ಯಗಳಲ್ಲಿ ಅಡುಗೆ ತಯಾರಿಸಿ ಸಾಮೂಹಿಕ ಭೋಜನ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.