ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ದಾವಣಗೆರೆ: ಕಡಿಮೆ ಬೆಲೆಗೆ ಕಾಲು ಕೆ.ಜಿ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ₹ 5 ಲಕ್ಷ ಪಡೆದು ವಂಚನೆ ಮಾಡಿದ ಘಟನೆ ಹದಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ತುಮಕೂರು ಜಿಲ್ಲೆಯ ಕೊರಟಿಗೆರೆ ತಾಲ್ಲೂಕಿನ ಚಿಂಪುಗಾನಹಳ್ಳಿಯ ರಂಗನಾಥ ಹಣ ಕಳೆದುಕೊಂಡವರು. ಹುಬ್ಬಳ್ಳಿಯ ಸುರೇಶ್ ವಂಚನೆ ಮಾಡಿದ ಆರೋಪಿ.
ಕೊರಟಿಗೆರೆ ತಾಲ್ಲೂಕಿನ ಗೊರವನಹಳ್ಳಿಯ ಮಹಾಲಕ್ಷ್ಮಿ ದೇಗುಲದಲ್ಲಿ ರಂಗನಾಥ ಅವರಿಗೆ ಸುರೇಶ್ ಒಂದೂವರೆ ವರ್ಷದ ಹಿಂದೆ ಪರಿಚಿತನಾಗಿದ್ದನು. ಆಗ ಮೊಬೈಲ್ ಸಂಖ್ಯೆಯನ್ನು ಪರಸ್ಪರ ಹಂಚಿಕೊಂಡಿದ್ದರು. ಇತ್ತೀಚೆಗೆ ದೂರವಾಣಿ ಕರೆ ಮಾಡಿದ ಸುರೇಶ್, ಹಳೆ ಮನೆ ಕೆಡವಿದಾಗ ಚಿನ್ನದ ನಾಣ್ಯಗಳು ಸಿಕ್ಕಿರುವುದಾಗಿ ನಂಬಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ಹೇಳಿದ ಸುರೇಶ್, ಆಸಕ್ತಿ ಇದ್ದರೆ ಖರೀದಿಸುವಂತೆ ಪುಸಲಾಯಿಸಿದ್ದನು. ಜುಲೈ 23ರಂದು ಸಂತೆಬೆನ್ನೂರಿಗೆ ಕರೆಸಿಕೊಂಡು ಅಸಲಿತನ ಪರೀಕ್ಷಿಸುವಂತೆ ಚಿನ್ನದ ನಾಣ್ಯವೊಂದನ್ನು ನೀಡಿದ್ದನು. ಇದು ನೈಜ ಚಿನ್ನವೆಂಬುದು ಖಚಿತವಾದ ಬಳಿಕ ರಂಗನಾಥ್ ನಾಣ್ಯ ಖರೀದಿಗೆ ಉತ್ಸುಕತೆ ತೋರಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುರೇಶ್ ಸೂಚನೆಯ ಮೇರೆಗೆ ರಂಗನಾಥ್ ₹ 5 ಲಕ್ಷದೊಂದಿಗೆ ಮಂಗಳವಾರ ದಾವಣಗೆರೆ ತಾಲ್ಲೂಕಿನ ಕುರ್ಕಿ ಗ್ರಾಮಕ್ಕೆ ಬಂದಿದ್ದರು. ಗ್ರಾಮದ ಹೊರವಲಯದಲ್ಲಿ ಭೇಟಿಯಾದ ಸುರೇಶ್, ಮೊದಲು ಹಣ ಪಡೆದಿದ್ದನು. ಈ ಸಮಯದಲ್ಲಿ ಗುಂಪೊಂದು ತಮ್ಮತ್ತ ಧಾವಿಸುತ್ತಿರುವುದನ್ನು ಗಮನಿಸಿದ ರಂಗನಾಥ್ ಭಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು. ಆಗ ಸುರೇಶ್ ಹಣದೊಂದಿಗೆ ಪರರಾರಿಯಾಗಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.