
ಹರಿಹರ: ‘ಸಮುದಾಯದ ಪಾಲ್ಗೊಳ್ಳುವಿಕೆ ಇದ್ದಾಗ ಮಾತ್ರ ಸರ್ಕಾರಿ ಶಾಲಾ, ಕಾಲೇಜುಗಳ ಆಸ್ತಿಗಳ ಸಂರಕ್ಷಣೆ ಸಾಧ್ಯ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪ ಹೇಳಿದರು.
ಹೊರವಲಯದ ಗುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಐರಣಿ ಹನುಮಂತಪ್ಪ ಅವರನ್ನು ಸತ್ಕರಿಸಿ ಮಾತನಾಡಿದರು.
‘ಸ್ವಾತಂತ್ರ್ಯ ಹೋರಾಟಗಾರ ವಿನೋಬಾ ಭಾವೆ ಅವರ ಪ್ರೇರಣೆಯಿಂದ ದೇಶದಾದ್ಯಂತ ಸರ್ಕಾರಿ ಶಾಲಾ, ಕಾಲೇಜುಗಳಿಗೆ ದಾನಿಗಳು ಲಕ್ಷಾಂತರ ಎಕರೆ ಜಮೀನು, ನಿವೇಶನ ಇತರೆ ಆಸ್ತಿ, ಪಾಸ್ತಿಗಳನ್ನು ದಾನ ಮಾಡಿದ್ದಾರೆ. ಸರ್ಕಾರಿ ಶಾಲಾ, ಕಾಲೇಜುಗಳ ಅಭಿವೃದ್ಧಿಗೆ ಬಳಸಿಕೊಳ್ಳಲಿ ಎಂಬ ಸದುದ್ದೇಶದಿಂದ ದಾನಿಗಳು ಮಾಡಿದ ದಾನದ ಆಸ್ತಿ, ಪಾಸ್ತಿಗಳ ಪೈಕಿ ಕೆಲವು ಬಲಾಢ್ಯರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಕೋಟಿಗಟ್ಟಲೆ ಬೆಲೆಬಾಳುವ ಇಂತಹ ಆಸ್ತಿಗಳ ರಕ್ಷಣೆಗೆ ಶಿಕ್ಷಣ ಇಲಾಖೆಯ ಜೊತೆಗೆ ಸಮುದಾಯದ ಕಾಳಜಿಯೂ ಅಗತ್ಯವಾಗಿದೆ’ ಎಂದರು.
’ಹಿರಿಯರಾದ ಐರಣಿ ಹನುಮಂತಪ್ಪನವರ ಪ್ರಯತ್ನದ ಫಲವಾಗಿ ಗುತ್ತೂರು ಸರ್ಕಾರಿ ಪ್ರೌಢಶಾಲೆ ಹಾಗೂ ಹರಿಹರದ ಡಿಆರ್ಎಂ ಸರ್ಕಾರಿ ಪ್ರೌಢಶಾಲೆಯ ಕೋಟಿಗಟ್ಟಲೆ ಬೆಲೆಬಾಳುವ ಜಮೀನುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಇಂದಿನ ಯುವಜನತೆಗೆ ಇವರು ಆದರ್ಶವಾಗಿದ್ದಾರೆ‘ ಎಂದು ಗುಣಗಾನ ಮಾಡಿದರು.
‘ಇಳಿ ವಯಸ್ಸಿನಲ್ಲೂ ಹನುಮಂತಪ್ಪನವರು ಯುವಕರಂತೆ ತಮ್ಮ ಸ್ವಂತ ವೆಚ್ಚದಲ್ಲೇ ಶಾಲೆ, ಸ್ಮಶಾನ, ದೇವಸ್ಥಾನಗಳ ಆಸ್ತಿಗಳ ವ್ಯಾಜ್ಯಕ್ಕೆ ಸಂಬಂಧಿಸಿ ದಾವಣಗೆರೆ, ಬೆಂಗಳೂರಿನ ವಕೀಲರನ್ನು ಭೇಟಿ ಮಾಡಿ ಅಗತ್ಯ ದಾಖಲೆ, ಮಾಹಿತಿಗಳನ್ನು ಒದಗಿಸುತ್ತಾರೆ‘ ಎಂದು ಮುಖ್ಯ ಶಿಕ್ಷಕ ರವಿನಾಯ್ಕ್ ಹೇಳಿದರು.
‘ಖಾಸಗಿ ಶಾಲೆಗಳಲ್ಲಿ ಓದಿಸುವ ಚೈತನ್ಯ ಇಲ್ಲದ ಬಡ ಕುಟುಂಬದವರ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲಾ, ಕಾಲೇಜುಗಳೇ ಆಧಾರವಾಗಿವೆ. ಈ ಶಿಕ್ಷಣ ಸಂಸ್ಥೆಗಳ ಸಂರಕ್ಷಣೆಗೆ ಸಂಘ, ಸಂಸ್ಥೆಗಳು ಮುಂದಾಗಬೇಕು, ಆಗ ಅತಿಕ್ರಮಣ ಮಾಡುವವರು ಹಿಂದಕ್ಕೆ ಸರಿಯುತ್ತಾರೆ’ ಎಂದು ಐರಣಿ ಹನುಮಂತಪ್ಪ ತಿಳಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ್ ಬಿ.ಜೆ., ಮಾಜಿ ಅಧ್ಯಕ್ಷ ಕರಿಬಸಪ್ಪ, ಶಿಕ್ಷಕರಾದ ಶ್ರೀಧರ್ ಮೈಯ, ರವೀಂದ್ರ, ನಾಗರಾಜ್, ಮಂಜುನಾಥ್ ಆಡಿನ್, ಗಾಯನ ಕಲಾವಿದ ಅಣ್ಣಪ್ಪ ಅಜ್ಜೇರ್ ಹಾಗೂ ವಿದ್ಯಾರ್ಥಿಗಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.