ದಾವಣಗೆರೆ: ಗಂಟಲು ನೋವು ಹಾಗೂ ಉಸಿರಾಟದ ಸಮಸ್ಯೆ ಇದ್ದ ವೃದ್ಧೆಯೊಬ್ಬರು ಬೆಡ್ ಹಾಗೂ ಆಕ್ಸಿಜನ್ ಸಿಗದೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದಾರೆ.
ಹರಪನಹಳ್ಳಿ ತಾಲ್ಲೂಕಿನ ಕೋಡಿಯಾಲ ಗ್ರಾಮದ ವೃದ್ಧೆ ಅನಸೂಯಮ್ಮ ಅವರಿಗೆ ಗಂಟಲು ನೋವು ಕಾಣಿಸಿಕೊಂಡಿದ್ದು, ಆರಂಭ
ದಲ್ಲಿ ಹರಪನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಗಂಟಲು ಪರೀಕ್ಷಿಸಿದಾಗ ಉಸಿರಾಟಕ್ಕೆ ಆಕ್ಸಿಜನ್ ಅಗತ್ಯ ಇರುವುದನ್ನು ಮನಗಂಡ ಅಲ್ಲಿಯ ವೈದ್ಯರು ತಾಲ್ಲೂಕು ಆಸ್ಪತ್ರೆಗೆ ಹೋಗಲು ಸೂಚಿಸಿದ್ದಾರೆ. ಅಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದಿದೆ.
ಉಸಿರಾಟಕ್ಕೆ ತೊಂದರೆ ಇದ್ದುದರಿಂದ ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಹೋಗಲು ಇಲ್ಲಿಯ ಆಸ್ಪತ್ರೆಯವರು ಸೂಚಿಸಿದರು. ದಾವಣಗೆರೆಯ ಸಿ.ಜಿ. ಆಸ್ಪತ್ರೆಗೆ ಆಕ್ಸಿಜನ್ಗೆಂದು ಬಂದಾಗ, ಕೋವಿಡ್ ಇಲ್ಲದವರಿಗೆ ಇಲ್ಲಿ ಆಕ್ಸಿಜನ್ ಸಿಗುವುದಿಲ್ಲ. ಹೀಗಾಗಿ ಬಾಪೂಜಿ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದರು.
‘ಬಾಪೂಜಿ ಆಸ್ಪತ್ರೆಗೆ ಬಂದಾಗ ‘ಬೆಡ್ ಖಾಲಿ ಇಲ್ಲ’ ಎಂದು ಹೇಳಿದರು. ಆಮೇಲೆ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿತು. ₹ 20 ಸಾವಿರ ಹಣ ಕಟ್ಟಿದರೆ ದಾಖಲಿಸಿಕೊಳ್ಳುತ್ತೇವೆ’ ಎಂದರು. ನಮ್ಮ ಬಳಿ ಹಣವಿರಲಿಲ್ಲ.ಹರಪನಹಳ್ಳಿಯ ಖಾಸಗಿ ಆಸ್ಪತ್ರೆಗೆ ಹೋಗಿದ್ದೇವೆ’ ಎಂದು ಅಜ್ಜಿಯ ಮೊಮ್ಮಗ ಶಿವರಾಜ್ ಅಳಲು ತೋಡಿಕೊಂಡರು.
‘ಕೊರೊನಾ ನೆಗೆಟಿವ್ ಬಂದಿದ್ದರೂ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಿಲ್ಲ. ಬಾಪೂಜಿ ಆಸ್ಪತ್ರೆಯಲ್ಲಿ ₹2000 ಅಡ್ವಾನ್ಸ್ ಕಟ್ಟಿಸಿಕೊಂಡಿದ್ದು,ಪ್ರತಿದಿನ ₹5 ಸಾವಿರ ಪಾವತಿಸುವಂತೆ ಹೇಳಿದ್ದರಿಂದ ನಮಗೆ ಕಟ್ಟಲು ಆಗದೇ ಹರಪನಹಳ್ಳಿಗೆ ಹೋದೆವು’ ಎಂದು ಶಿವರಾಜ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.