ADVERTISEMENT

ಹರಿಹರ | ಕಸದ ರಾಶಿಗೆ ಬೆಂಕಿ: ನಗರಸಭೆಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 2:43 IST
Last Updated 3 ಮಾರ್ಚ್ 2026, 2:43 IST
ಹರಿಹರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಫೆ. 27ರಂದು ಕಸದ ರಾಶಿಗೆ ಬೆಂಕಿ ಹಾಕಿದಾಗ ದಟ್ಟ ಹೊಗೆ ಆವರಿಸಿರುವುದು 
ಹರಿಹರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಫೆ. 27ರಂದು ಕಸದ ರಾಶಿಗೆ ಬೆಂಕಿ ಹಾಕಿದಾಗ ದಟ್ಟ ಹೊಗೆ ಆವರಿಸಿರುವುದು    

ಹರಿಹರ: ಕಸದ ರಾಶಿಗೆ ಬೆಂಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಇಲ್ಲಿನ ನಗರಸಭೆಗೆ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ನೋಟಿಸ್ ನೀಡಿದೆ.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ಅಕ್ಕ ಕ್ಯಾಂಟೀನ್ ಎದುರು ಫೆ. 27ರಂದು ಬೆಳಿಗ್ಗೆ ಗುಡಿಸಿದ ಕಸದ ರಾಶಿಗೆ ಬೆಂಕಿ ಹಾಕಲಾಗಿತ್ತು. ಇದರ ಚಿತ್ರ ಹಾಗೂ ವಿಡಿಯೊವನ್ನು ಸಾರ್ವಜನಿಕರೊಬ್ಬರು ವಾಟ್ಸ್‌ಆ್ಯಪ್‌ ಮೂಲಕ ಮಂಡಳಿಗೆ ಕಳುಹಿಸಿ ದೂರು ಸಲ್ಲಿಸಿದ್ದರು.

ಈ ದೂರನ್ನಾಧರಿಸಿ ದಾವಣಗೆರೆಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್ ಅವರು ನಗರಸಭೆ ಅಧಿಕಾರಿಗಳಿಗೆ ನೋಟಿಸ್ ನೀಡಿ ಇಂತಹ ಘಟನೆ ಪುನರಾವರ್ತನೆ ಆಗದಂತೆ ನಿಗಾವಹಿಸಲು ಸೂಚಿಸಿದ್ದಾರೆ.

ADVERTISEMENT

ನಗರದ ರಸ್ತೆ ಬದಿ, ಖಾಲಿ ನಿವೇಶನ, ಚರಂಡಿಗಳಲ್ಲಿ ಶೇಖರಿಸಿದ ಘನತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯವನ್ನು ಕೂಡಲೇ ವಿಲೇವಾರಿ ಮಾಡಬೇಕು, ಇಂತಹ ತ್ಯಾಜ್ಯ ಹರಡದಂತೆ ಹಾಗೂ ನಗರದಲ್ಲಿ ಸ್ವಚ್ಛತೆಗಾಗಿ ಸೂಕ್ತ ಕ್ರಮ ವಹಿಸಬೇಕು, ಕಸದ ರಾಶಿ ಸುಡದಂತೆ ಪೌರ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ನಿರ್ದೇಶನ ನೀಡಿ ಅನುಪಾಲನ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.

ನಗರದ ಹಲವೆಡೆ ಕಸದ ರಾಶಿ ಸುಡುವುದು ಸಾಮಾನ್ಯವಾಗಿದೆ. ಇದರಿಂದ ಹಲವು ಗಂಟೆಗಳ ಕಾಲ ಸುತ್ತಲಿನ ವಾತಾವರಣದಲ್ಲಿ ದಟ್ಟವಾದ ಹಾಗೂ ವಿಷಕಾರಿ ಹೊಗೆ ಆವರಿಸುತ್ತದೆ. ಈ ಹೊಗೆ ಸೇವನೆ ಮಾಡುವವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹಲವು ಸಾರ್ವಜನಿಕರು ದೂರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.