
ಹರಿಹರ: ಪ್ರತಿಷ್ಠಿತ ಉದ್ಯಮಗಳಲ್ಲಿ ಉದ್ಯೋಗ ಪಡೆಯಲು ವಿದ್ಯಾರ್ಥಿಗಳು ಉದ್ಯಮ ಆಧರಿತ ಕೌಶಲಗಳನ್ನು ಕಲಿಯಲು ಆದ್ಯತೆ ನೀಡಬೇಕು ಎಂದು ಬೆಂಗಳೂರಿನ ರಗ್ ರೆಲ್ ಕಾಂಪೋನೆಂಟ್ಸ್ ಅಂಡ್ ಸಿಸ್ಟಮ್ಸ್ ಸಂಸ್ಥೆಯ ಮುಖ್ಯಸ್ಥ ಹಾಗೂ ರಿಫಾ ಚೆಂಬರ್ ಆಫ್ ಕಾಮರ್ಸ್ ರಾಜ್ಯ ಘಟಕದ ಧ್ಯಕ್ಷ ಸೈಯದ್ ಮುಮ್ತಾಜ್ ಮನ್ಸೂರಿ ಹೇಳಿದರು.
ನಗರದ ಚಾನಲ್ ರಸ್ತೆಯ ಕಾಳಿದಾಸ ನಗರದ ಸಂಕಲ್ಪ ಅಕಾಡೆಮಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಾರ್ಷಿಕ ಕಾರ್ಯಕ್ರಮ ‘ಪರ್ವಾಜ್ 3.0’ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಪದವಿಯಲ್ಲಿ ಉತ್ತಮ ಅಂಕಗಳನ್ನು ಪಡೆದರೆ ಸಾಲದು, ಸುಲಲಿತವಾಗಿ ಆಂಗ್ಲ ಭಾಷೆಯಲ್ಲಿ ಮಾತನಾಡುವುದು, ಕಂಪ್ಯೂಟರ್, ವ್ಯಾಪಾರ, ವಹಿವಾಟಿನ ವಾಸ್ತವ ಕೌಶಲಗಳ ಕಲಿಕೆ ಅಗತ್ಯ. ಉದ್ಯೋಗದಾತರನ್ನು ಸೆಳೆಯುವಲ್ಲಿ ಈ ಅಂಶಗಳು ಪ್ರಮುಖವಾಗಿವೆ ಎಂದರು.
ಗ್ರಾಮೀಣ ಭಾಗದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಮಹಾನಗರಗಳ ವಿದ್ಯಾರ್ಥಿಗಳಂತೆ ಹೆಚ್ಚುವರಿ ಕೌಶಲ, ತರಬೇತಿ ಪಡೆಯುವುದು ಮುಖ್ಯವಾಗಿದೆ ಎಂದು ಮಂತಿಖ್ ಟೆಕ್ನಾಲಜೀಸ್ ಸ್ಥಾಪಕ ಮೊಹ್ಮದ್ ಖಿಜರ್ ಹೇಳಿದರು.
ಮುಬಲ್ಲಿಗ್ ಸುನ್ನಿ ದಾವತ್ ಎ ಇಸ್ಲಾಂ ಸಂಸ್ಥೆಯ ಮುಖಂಡ ಸೈಯದ್ ಗುಲಾಮ್ ಹಸನ್ ನೂರಿ, ಮಲೆಬೆನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕಿ ಅತಿಯಾ ಕೌಸರ್, ಇಖ್ರಾ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮೊಹ್ಮದ್ ಇಸ್ಮಾಯಿಲ್ ಮುಲ್ಲಾ ಮಾತನಾಡಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿ ಜುವೇರಿಯಾ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಪ್ರಾಂಶುಪಾಲರು, ಅಧ್ಯಾಪಕರು, ಪೋಷಕರು, ವಿದ್ಯಾರ್ಥಿಗಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.