ADVERTISEMENT

ಹರಿಹರ: ಅ.27ಕ್ಕೆ ಹೇಮರೆಡ್ಡಿ ಮಲ್ಲಮ್ಮ, ಗಣಪತಿ ಶಿಲಾಮಂದಿರ ಅನಾವರಣ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 6:51 IST
Last Updated 25 ಅಕ್ಟೋಬರ್ 2025, 6:51 IST
ಹರಿಹರ ತಾಲ್ಲೂಕಿನ ಸಾರಥಿ ಗ್ರಾಮದಲ್ಲಿ ಅನಾವರಣಗೊಳ್ಳಲಿರುವ ಹೇಮರೆಡ್ಡಿ ಮಲ್ಲಮ್ಮ ಮತ್ತು ಮಹಾಗಣಪತಿ ನೂತನ ಶಿಲಾಮಂದಿರ
ಹರಿಹರ ತಾಲ್ಲೂಕಿನ ಸಾರಥಿ ಗ್ರಾಮದಲ್ಲಿ ಅನಾವರಣಗೊಳ್ಳಲಿರುವ ಹೇಮರೆಡ್ಡಿ ಮಲ್ಲಮ್ಮ ಮತ್ತು ಮಹಾಗಣಪತಿ ನೂತನ ಶಿಲಾಮಂದಿರ   

ಹರಿಹರ: ತಾಲ್ಲೂಕಿನ ಸಾರಥಿ ಗ್ರಾಮದಲ್ಲಿ ಅ.27 ರಂದು ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮತ್ತು ಮಹಾಗಣಪತಿಯ ನೂತನ ಶಿಲಾಮಂದಿರ ಅನಾವರಣ ಹಾಗೂ ಪ್ರಾಣ ಪತಿಷ್ಠಾಪನೆ, ಗೋಪುರ ಕಳಸಾರೋಹಣ, ಸರ್ವಧರ್ಮ ಸಮನ್ವಯ ಭಾವೈಕ್ಯತೆ ಧಾರ್ಮಿಕ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. 

ಅ.26 ರಂದು ಸಂಜೆ 5ಕ್ಕೆ ಗಂಗಾಪೂಜೆಯೊಂದಿಗೆ ಗೋಮಾತೆಯ ದೇವಾಲಯ ಪ್ರವೇಶ, ನಂತರ ಗಣಪತಿ ಪುಣ್ಯಹ, ನಾಂದಿಸಮಾರಾಧನೆ, ಗುರುಕಲಶ, ಅಂಕುರಾರೋಹಣ ನವಗ್ರಹ, ಮಹಾಲಕ್ಷ್ಮಿ, ಅಘೋರ ವಾಸ್ತು, ಪ್ರಧಾನ ಕಲಶಗಳ ಸ್ಥಾಪನೆ ಪೂಜೆ ನಡೆಸಿ, ರಾತ್ರಿ 8ಕ್ಕೆ ಶಿಲಾಮೂರ್ತಿಗಳನ್ನು ಸ್ಥಾಪಿಸಲಾಗುವುದು. 

ಅ.27 ರಂದು ಶಿಲಾಮೂರ್ತಿಗಳಿಗೆ ಏಕವಾರ ರುದ್ರಾಭಿಷೇಕ, ಅಷ್ಟೋತ್ತರ ಶತನಾಮಾವಳಿ ವಿಶೇಷ ಅಲಂಕಾರ, ಬೆಳಿಗ್ಗೆ 9 ರಿಂದ 10.30ರ ವರೆಗಿನ ಶುಭಮುಹೂರ್ತದಲ್ಲಿ ಎರೆಹೊಸಹಳ್ಳಿ ವೇಮನಯೋಗಿ ಗುರುಪೀಠದ ವೇಮನಾನಂದ ಮತ್ತು ಆವರಗೊಳ್ಳದ ಓಂಕಾರ ಶಿವಾಚಾರ್ಯ ಶ್ರೀ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ, ಮಹಾಮಂಗಳಾರತಿ ನಡೆಯಲಿದೆ.  

ADVERTISEMENT

ಬೆಳಿಗ್ಗೆ 11.30ಕ್ಕೆ ಸರ್ವಧರ್ಮ ಸಮನ್ವಯ ಭಾವೈಕ್ಯತೆಯ ಧಾರ್ಮಿಕ ಸಮಾರಂಭ ನಡೆಯಲಿದೆ. ಸಿರಿಗೆರಿ ತರಳಬಾಳು ಪೀಠದ ಶಿವಮೂರ್ತಿ ಶಿವಾಚಾರ್ಯ ಶ್ರೀ, ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ, ಚಿತ್ರದುರ್ಗ ಮುರುಘಾಮಠದ ಬಸವಕುಮಾರ ಶ್ರೀ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀ, ಕಾಗಿನಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀ, ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಶ್ರೀ, ಕೋಡಿಹಳ್ಳಿ ಆದಿಜಾಂಬವ ಗುರುಪೀಠದ ಷಡಕ್ಷರಮುನಿ ದೇಶಿಕೇಂದ್ರ ಶ್ರೀ, ವಡ್ಡನಾಳ ವಿಶ್ವಕರ್ಮ ಗುರುಪೀಠದ ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಶ್ರೀ, ಪದ್ಮಶಾಲಿ ಗುರುಪೀಠದ ಪ್ರಭುಲಿಂಗ ಶ್ರೀ, ಐರಣಿ ಹೊಳೆಮಠದ ಬಸವರಾಜ ಶ್ರೀ ಸಾನ್ನಿಧ್ಯ ವಹಿಸುವರು. 

ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸುವರು. ಹೇಮರಡ್ಡಿ ಮಲ್ಲಮ್ಮ ಸಮುದಾಯದ ಹಿರಿಯರಾದ ಎಸ್.ಜಿ.ರಾಜಶೇಖರಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವರಾದ ಎಸ್. ಎಸ್.ಮಲ್ಲಿಕಾರ್ಜುನ್, ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ಶಿವರಾಜ್ ತಂಗಡಗಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಗಾಲಿ ಜನಾರ್ದನ ರೆಡ್ಡಿ, ಬಸವರಾಜ್ ರಾಯರಡ್ಡಿ, ಕೆ.ಬಿ.ಕೋಳಿವಾಡ, ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಅವರು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ.

ಹೇಮರೆಡ್ಡಿ ಮಲ್ಲಮ್ಮ ಶಿಲಾಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.