ದಾವಣಗೆರೆ: ಹಿಜಾಬ್ ಕೇಸರಿ ಶಾಲು ವಿವಾದ ಇದೀಗ ದಾವಣಗೆರೆಗೂ ಕಾಲಿಟ್ಟಿದೆ. ಇಲ್ಲಿನ ಎಂಎಸ್ಬಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮಂಗಳವಾರ ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ.
'ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಮತ್ತು ಬುರ್ಖಾ ಹಾಕಿಕೊಂಡು ಕಾಲೇಜಿಗೆ ಬರುತ್ತಾರೆ ಅವರು ಸರಿಯಾಗಿ ಸಮವಸ್ತ್ರ ಹಾಕಿಕೊಂಡು ಬಂದರೆ ನಾವು ಕೂಡ ಶಾಲು ತೆಗೆದು ಸಮವಸ್ತ್ರದಲ್ಲಿ ಬರುತ್ತೇವೆ' ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದಿರುವುದನ್ನು ನೋಡಿದ ಪ್ರಾಂಶುಪಾಲರಾದ ಬಸವರಾಜ್ ಅವರು ತನ್ನ ಚೇಂಬರಿಗೆ ವಿದ್ಯಾರ್ಥಿಗಳನ್ನು ಕರೆಸಿಕೊಂಡಿದ್ದಾರೆ. 'ಕಾಲೇಜಿಗೆ ಒಳ್ಳೆಯ ಹೆಸರಿದೆ. ಬೇರೆ ಕಾಲೇಜುಗಳಲ್ಲಿ ಕೇಸರಿ ಶಾಲು ಹಾಕಿ ಕೊಂಡು ಬಂದಿದ್ದಾರೆ ಎಂಬ ಕಾರಣಕ್ಕೆ ನೀವು ಅದೇ ರೀತಿ ಮಾಡುವುದು ಸರಿಯಲ್ಲ. ಶಾಲು ತೆಗೆಯಿರಿ ಚೆನ್ನಾಗಿ ಓದಿ' ಎಂದು ಬುದ್ಧಿವಾದ ಹೇಳಿದರು.
ಆದರೆ ಪ್ರಾಂಶುಪಾಲರ ಬುದ್ಧಿಮಾತುಗಳನ್ನು ಕೇಳಲು ವಿದ್ಯಾರ್ಥಿಗಳು ತಯಾರಿರಲಿಲ್ಲ. 'ಎಲ್ಲರಿಗೂ ಒಂದೇ ರೀತಿಯ ನಿಯಮ ಅನ್ವಯ ವಾಗಲಿ' ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದರು.
ಹೈಕೋರ್ಟ್ ತೀರ್ಪು ಬರುವವರೆಗೆ ಕಾಯಿರಿ ಆಮೇಲೆ ಸರಿಯಾದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಾಹಿಲ್ ಹೊಒಲೆ, ಚಿರಂಜೀವಿ, ಸುರೇಶ್, ಅಚ್ಚುತ್ ಪಟೇಲ್, ರಾಜು ಬೀರಪ್ಪ ಹೆಗ್ದೆ, ವಿನೋದ್ ಸಫಾರೆ, ಪ್ರಜ್ವಲ್, ಗಗನ್ ಸಹಿತ ಐವತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಹಾಲು ಹಾಕಿಕೊಂಡು ಬಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.