ದಾವಣಗೆರೆ: ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾಗಣಪತಿ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿಯ ವೈಭವದ ಶೋಭಾಯಾತ್ರೆ ಮತ್ತು ವಿಸರ್ಜನೆ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಸಂಸದರು, ಶಾಸಕರು, ಹಿಂದು ಮಹಾಸಭಾದ ಪ್ರಮುಖರು ಸೇರಿ ಇನ್ನಿತರ ಗಣ್ಯರು ವಿಸರ್ಜನಾ ಮೆರವಣಿಗೆ ಆರಂಭಿಸುವ ವೇಳೆ ಉಪಸ್ಥಿತರಿದ್ದರು. ಹೈಸ್ಕೂಲ್ ಮೈದಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ಆರಂಭಗೊಂಡಿತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಾತಿಕೆರೆ ವರೆಗೆ ಶೋಭಾಯಾತ್ರೆ ನಡೆಯಿತು. ಅಲ್ಲಿ ವಿಗ್ರಹ ವಿಸರ್ಜನೆ ಮಾಡಲಾಯಿತು.
ನಾಸಿಕ್ ಬ್ಯಾಂಡ್ ಸಹಿತ ವಿವಿಧ ವಾದನಗಳು ಶೋಭಾಯಾತ್ರೆಗೆ ಮೆರುಗು ನೀಡಿದವು. ಭಾರಿ ಸಂಖ್ಯೆಯಲ್ಲಿ ಕಿಕ್ಕಿರಿದು ಸೇರಿದದ್ದ ಜನರು ಜಯಘೋಷಗಳನ್ನು ಕೂಗಿದರು.
ಐದು ದಿನಗಳ ಕಾಲ ಮಾತ್ರ ಗಣಪತಿ ಪ್ರತಿಷ್ಠಾಪಿಸಲು ಜಿಲ್ಲೆಯಾದ್ಯಂತ ಜಿಲ್ಲಾಡಳಿತವು ಅವಕಾಶ ನೀಡಿತ್ತು. ಹಿಂದೂ ಮಹಾಗಣಪತಿ ಮಾತ್ರ 15 ದಿನಗಳ ಕಾಲ ಪೂಜನೆಗೊಂಡಿತು. ಜನರು ಮಾಸ್ಕ್, ಅಂತರ ಇಲ್ಲದೇ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಸಹಿತ ವಿವಿಧ ಅಧಿಕಾರಿಗಳು ಕೂಡಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಸ್ವಯಂ ದೂರು ದಾಖಲು
ದಾವಣಗೆರೆ: ಕೋವಿಡ್ ನಿಯಮ ಮೀರಿ ಅದ್ದೂರಿ ಮೆರವಣಿಗೆ ಮಾಡಿದ ಕಾರಣಕ್ಕಾಗಿ ಹಿಂದೂ ಮಹಾಗಣಪತಿ ಸಮಿತಿಯ ಮೇಲೆ ಸಾಂಕ್ರಮಿಕ ರೋಗ ನಿಯಂತ್ರಣ ಕಾಯ್ದೆ ಪ್ರಕಾರ ಬಡಾವಣೆ ಠಾಣೆ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ.
ಸಮಿತಿಯ ಅಧ್ಯಕ್ಷ ಜೊಳ್ಳಿ ಗುರು ಸೇರಿ 15 ಜನರ ಮೇಲೆ ಎಫ್ಐಆರ್ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.