ಹೊನ್ನಾಳಿ: ಪಟ್ಟಣದ ಮನೆಯೊಂದರಲ್ಲಿ ಸ್ನಾನಕ್ಕೆಂದು ನೀರು ಕಾಯಿಸಲು ಹೋದಾಗ ಬಾಯ್ಲರ್ ಸಿಡಿದು ಸುಟ್ಟಗಾಯಗಳಿಂದ ತೀವ್ರವಾಗಿ ಗಾಯಗೊಂಡಿದ್ದ ಬಾಲಕಿ ಸ್ವೀಕೃತಿ (11) ಮೃತಪಟ್ಟಿದ್ದಾಳೆ.
ಬೆನಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ನಿರೀಕ್ಷಕ ಹೂವಾನಾಯ್ಕ ಅವರ ದುರ್ಗಿಗುಡಿ ದುರ್ಗಮ್ಮ ದೇವಸ್ಥಾನದ ಬಳಿಯಿರುವ ಮನೆಯಲ್ಲಿ ಮಂಗಳವಾರ ಅವಘಡ ಸಂಭವಿಸಿತ್ತು.
ಮಗಳನ್ನು ಎಳೆದುಕೊಳ್ಳಲು ಹೋದ ಹೂವಾನಾಯ್ಕ, ಪತ್ನಿ ಸುನೀತಾಬಾಯಿ ಹಾಗೂ ಅಜ್ಜಿ ತೀರ್ಥಿಬಾಯಿ ಕೂಡಾ ಗಾಯಗೊಂಡಿದ್ದಾರೆ.
ಗಾಯಗೊಂಡವರಿಗೆ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಸ್ವೀಕೃತಿ ಮೃತಪಟ್ಟಿದ್ದಾಳೆ.
72 ವರ್ಷದ ಅಜ್ಜಿ ತೀರ್ಥಿಬಾಯಿಯವರಿಗೂ ಗಂಭೀರ ಗಾಯಗಳಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ ಎಂದು ಸಿಪಿಐ ಸುನಿಲ್ಕುಮಾರ್ ತಿಳಿಸಿದ್ದಾರೆ.
ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.