
ಹೊನ್ನಾಳಿಯ ತುಮ್ಮಿನಕಟ್ಟೆ ರಸ್ತೆಯಲ್ಲಿರುವ ಖಬರಸ್ತಾನದ ಬಳಿ ನಿರ್ಮಿಸುತ್ತಿರುವ ಚರಂಡಿ ಕಾಮಗಾರಿಯನ್ನು ಎಂ.ಪಿ.ರೇಣುಕಾಚಾರ್ಯ ಪರಿಶೀಲಿಸಿದರು
ಹೊನ್ನಾಳಿ: ‘ತಾಲ್ಲೂಕಿನ ಗಡಿಭಾಗದಿಂದ ಆರಂಭವಾಗುವ ತುಮ್ಮಿನಕಟ್ಟೆ ರಸ್ತೆಯಲ್ಲಿ ಬರುವ ಖಬರಸ್ಥಾನದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗಿನ ರಸ್ತೆ ವಿಸ್ತರಣೆ ಹಾಗೂ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಕಳಪೆಯಿಂದ ಕೂಡಿದೆ. ಇದನ್ನು ಕೂಡಲೇ ಸರಿಪಡಿಸದಿದ್ದರೆ ಹೋರಾಟ ಮಾಡಲಾಗುವುದು’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದರು.
ಖಬರಸ್ತಾನದ ಬಳಿ ನಡೆಯುತ್ತಿರುವ ಚರಂಡಿ ಕಾಮಗಾರಿಯನ್ನು ಭಾನುವಾರ ವೀಕ್ಷಿಸಿ ಮಾತನಾಡಿದರು.
‘ತುಮ್ಮಿನಕಟ್ಟೆ ರಸ್ತೆಯ ಎಡಭಾಗದಲ್ಲಿ ಕಡಿಮೆ ಜಾಗವನ್ನು ತೆಗೆದುಕೊಳ್ಳಲಾಗಿದೆ. ಬಲಭಾಗದಲ್ಲಿ ಹೆಚ್ಚು ಜಾಗವನ್ನು ಕ್ರಮಿಸಿಕೊಂಡು ಕಾಮಗಾರಿ ಕೈಗೊಳ್ಳಲಾಗಿದೆ. ಪಟ್ಟಣದೊಳಗೆ ಅಂಕುಡೊಂಕಾಗಿ ಚರಂಡಿ ನಿರ್ಮಿಸಲಾಗಿದೆ’ ಎಂದರು.
‘ಖಬರಸ್ಥಾನದ ಬಳಿ ನಡೆಯುತ್ತಿರುವ ಚರಂಡಿಗೆ ಬಳಸಿದ ಸಿಮೆಂಟ್ ಉದುರುತ್ತಿದೆ, ಚರಂಡಿ ಪಕ್ಕಕ್ಕೆ ಗ್ರಾವೆಲ್ ಬಳಸದೇ ರಸ್ತೆಯಲ್ಲಿಯೇ ಸಿಕ್ಕ ಹೊಳೆಮಣ್ಣು ಬಳಸಲಾಗಿದೆ. ಚರಂಡಿ ಕಾಮಗಾರಿಯಲ್ಲಿ ಗುಣಮಟ್ಟದ ಜಲ್ಲಿಕಲ್ಲುಗಳನ್ನು ಬಳಸಿಲ್ಲ’ ಎಂದು ದೂರಿದರು.
‘ಕಾಮಗಾರಿಯನ್ನು ಸರಿಪಡಿಸುವವರೆಗೂ ಬಿಲ್ ಮಾಡಬಾರದು’ ಎಂದರು.
ಬಿಜೆಪಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಜೆ.ಕೆ. ಸುರೇಶ್, ಪುರಸಭೆ ಮಾಜಿ ಅಧ್ಯಕ್ಷ ರಂಗನಾಥ್, ಶ್ರೀಧರ್, ಬಾಬು, ಮುಖಂಡರಾದ ಎಂ.ಎಸ್. ಫಾಲಾಕ್ಷಪ್ಪ, ಎಸ್.ಎಸ್. ಬೀರಪ್ಪ, ಪೇಟೆ ಪ್ರಶಾಂತ್, ರಾಘವೇಂದ್ರ, ನೆಲಹೊನ್ನೆ ಮಂಜುನಾಥ್ ಸೇರಿದಂತೆ ನೂರಾರು ಜನ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.