ADVERTISEMENT

ಒಳಮೀಸಲಾತಿ ಕಲ್ಪಿಸದೇ ಹುದ್ದೆ ಭರ್ತಿಗೆ ವಿರೋಧ: ಶಾಸಕರಿಗೆ ಮುತ್ತಿಗೆ ಹಾಕಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 20:08 IST
Last Updated 1 ಮಾರ್ಚ್ 2026, 20:08 IST
ದಾವಣಗೆರೆಯಲ್ಲಿ ಮಾದಿಗ ಸಮುದಾಯದ ಮುಖಂಡರು ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು 
ದಾವಣಗೆರೆಯಲ್ಲಿ ಮಾದಿಗ ಸಮುದಾಯದ ಮುಖಂಡರು ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು    

ದಾವಣಗೆರೆ: ಒಳಮೀಸಲಾತಿ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿ ಮಾದಿಗ ಸಮುದಾಯದ ಮುಖಂಡರು ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ನಗರದಲ್ಲಿ ಭಾನುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. 

ಇಲ್ಲಿನ ಹಳೆ ಪ್ರವಾಸಿ ಮಂದಿರಕ್ಕೆ ಕೆ.ಎಸ್.ಬಸವಂತಪ್ಪ ಬರುತ್ತಿದ್ದಂತೆ ಪ್ರತಿಭಟನಕಾರರು ಕಾರನ್ನು ಸುತ್ತುವರಿದರು. ಅವರು ಕೆಳಗಿಳಿದಾಗ ಮುತ್ತಿಗೆ ಹಾಕಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

‘ಒಳಮೀಸಲಾತಿ ಕಲ್ಪಿಸದೇ 56 ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಸಮುದಾಯದ ಸಚಿವರು, ಶಾಸಕರು ತುಟಿ ಬಿಚ್ಚುತ್ತಿಲ್ಲ. ಇದರಿಂದ ಸಮುದಾಯದವರಿಗೆ ಅನ್ಯಾಯವಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ADVERTISEMENT

‘ಒಳಮೀಸಲಾತಿ ಕಲ್ಪಿಸದೇ 56 ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆಸುವುದನ್ನು ಸರ್ಕಾರ ತಡೆಹಿಡಿಯಬೇಕು. ಈ ವಿಚಾರದಲ್ಲಿ ಸರ್ಕಾರ ಮೌನ ತಾಳಿದರೆ ಮಾರ್ಚ್‌ 6ರಂದು ದಾವಣಗೆರೆ ಬಂದ್ ನಡೆಸಲಾಗುವುದು’ ಎಂದು ಮುಖಂಡರು ಎಚ್ಚರಿಸಿದರು. 

‘ಸಮುದಾಯದ ಮುಖಂಡರು, ಶಾಸಕರು, ಸಚಿವರೊಂದಿಗೆ ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿ ಮಾಡಿ ಒಳಮೀಸಲಾತಿ ಕಲ್ಪಿಸಿಯೇ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು. ಪ್ರಧಾನಮಂತ್ರಿ ಬಳಿಗೆ ಸರ್ವಪಕ್ಷದ ನಿಯೋಗ ಕರೆದೊಯ್ಯುವ ಬಗ್ಗೆಯೂ ಒತ್ತಡ ಹೇರಲಾಗುವುದು’ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಭರವಸೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.