
ಜಗಳೂರು: ಸರ್ಕಾರದಿಂದ ಇಲ್ಲಿನ ಎಪಿಎಂಸಿ ಆವರಣದಲ್ಲಿ ತೆರೆಯಲಾಗಿರುವ ರಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ರೈತರು ಮುಗಿ ಬೀಳುತ್ತಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಿಂದ ರಾಗಿ ಖರೀದಿಸಲಾಗುತ್ತಿದೆ. ದಾವಣಗೆರೆ ರಸ್ತೆಯಲ್ಲಿರುವ ಎಪಿಎಂಸಿ ಮುಂಭಾಗದಲ್ಲಿ ಹಲವು ದಿನಗಳಿಂದ ರೈತರ ರಾಗಿ ಚೀಲಗಳನ್ನು ಹೊತ್ತ ಸಾಲುಸಾಲು ಟ್ರ್ಯಾಕ್ಟರ್ಗಳು, ಸರಕು ವಾಹನಗಳು ಸರದಿಯಲ್ಲಿ ರಾತ್ರಿ– ಹಗಲು ಎನ್ನದೇ ಕಾಯುತ್ತಿವೆ.
ಮಾರುಕಟ್ಟೆಗಿಂತ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಹೆಚ್ಚಿನ ದರ ನಿಗದಿ ಆಗಿರುವುದರಿಂದ ರೈತರು ಉತ್ಸಾಹ ತೋರುತ್ತಿದ್ದಾರೆ. ಕಸಬಾ, ಬಿಳಿಚೋಡು ಹಾಗೂ ಸೊಕ್ಕೆ ಹೋಬಳಿ ವ್ಯಾಪ್ತಿಯ ರೈತರು ತಮ್ಮ ಬೆಳೆಯನ್ನು ಮಾರಟ ಮಾಡಲು ಕೇಂದ್ರಕ್ಕೆ ನೂಕುನುಗ್ಗಲಿನಲ್ಲಿ ಧಾವಿಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಕಡಿಮೆ ದರ ಇದ್ದು, ಖರೀದಿ ಕೇಂದ್ರದಲ್ಲಿ ಪ್ರತಿ ಕ್ವಿಂಟಲ್ಗೆ ₹ 4,861 ದರ ನಿಗದಿಯಾಗಿದೆ. ಆದ್ದರಿಂದ ರೈತರು ಕೇಂದ್ರದಲ್ಲಿ ಮಾರಾಟ ಮಾಡಲು ಆಸಕ್ತಿ ತೋರುತ್ತಿದ್ದಾರೆ.
‘ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಲು ತಾಲ್ಲೂಕಿನ 3,149 ರೈತರು 89,441 ಸಾವಿರ ಕ್ವಿಂಟಲ್ ರಾಗಿ ಮಾರಾಟಕ್ಕೆ ಸಂಬಂಧಿಸಿದಂತೆ ನೋಂದಣಿ ಮಾಡಿಕೊಂಡಿದ್ದಾರೆ. ಫೆ. 23ರಿಂದ ಖರೀದಿ ಪ್ರಕ್ರಿಯೆ ಆರಂಭವಾಗಿದ್ದು, ಈವರೆಗೆ 12,000 ಕ್ವಿಂಟಲ್ ಖರೀದಿಯಾಗಿದೆ. ನೋಂದಣಿ ಆಗಿರುವ ಎಲ್ಲ ರೈತರ ರಾಗಿಯನ್ನು ಖರೀದಿ ಮಾಡಲಾಗುತ್ತದೆ’ ಎಂದು ತಹಶೀಲ್ದಾರ್ ಕಲೀಂ ಉಲ್ಲಾ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.
‘ಮೆಕ್ಕೆಜೋಳಕ್ಕೆ ಕಡಿಮೆ ದರ ಇರುವುದು ಹಾಗೂ ಹೆಚ್ಚು ಮಳೆ ಬೇಡುವುದರಿಂದ ಈ ಬಾರಿ ತಾಲ್ಲೂಕಿನಲ್ಲಿ ಹೆಚ್ಚಿನ ರೈತರು ರಾಗಿ ಬೆಳೆಯತ್ತ ಆಕರ್ಷಿತರಾಗಿದ್ದಾರೆ. ಮುಂಗಾರು ಹಂಗಾಮಿನಲ್ಲಿ ನೀರಾವರಿ ಹಾಗೂ ಮಳೆಯಾಶ್ರಿತ ಸೇರಿ ತಾಲ್ಲೂಕಿನಲ್ಲಿ 1,800 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ. ಪ್ರತಿ ಹೆಕ್ಟೇರ್ಗೆ ಕನಿಷ್ಠ 20 ಕ್ವಿಂಟಲ್ ಇಳುವರಿ ನಿರೀಕ್ಷೆ ಇದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೆತಾ ಮಾಹಿತಿ ನೀಡಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಟ್ರ್ಯಾಕ್ಟರ್ಗಳಲ್ಲಿ ರಾಗಿ ಬೆಳೆಯನ್ನು ಹೇರಿಕೊಂಡು ಬಂದಿರುವ ರೈತರು ತಮ್ಮ ಮಾರಾಟದ ಸರದಿಗಾಗಿ ಕಾಯುತ್ತ ಹಗಲು– ರಾತ್ರಿ ಎನ್ನದೇ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದ ಪ್ರಾಂಗಣದಲ್ಲಿ ಬೀಡುಬಿಟ್ಟಿದ್ದಾರೆ. ಹಗಲು ಮತ್ತು ರಾತ್ರಿ ಪಾಳಯಗಳಲ್ಲಿ ರೈತರು ಕೇಂದ್ರದಲ್ಲಿ ಕಾದು ಕುಳಿತಿದ್ದಾರೆ.
ಮಾರ್ಚ್ 30ರವರೆಗೆ ರಾಗಿ ಖರೀದಿಗೆ ಅವಕಾಶ ಇದ್ದು ರೈತರು ಯವುದೇ ಕಾರಣಕ್ಕೂ ಆತಂಕ ಹಾಗೂ ಅವಸರ ಪಡುವ ಅಗತ್ಯವಿಲ್ಲಕಲೀಂ ಉಲ್ಲಾ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.