
ಉಕ್ಕಡಗಾತ್ರಿ (ಕಡರನಾಯ್ಕನಹಳ್ಳಿ): ಗ್ರಾಮದ ಆರಾಧ್ಯದೈವ ಕರಿಬಸವೇಶ್ವರ ರಥೋತ್ಸವ ಬುಧವಾರ ಲಕ್ಷಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ಬೆಳ್ಳಿ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂದಿಗುಡಿಯ ವೃಷಭಪುರಿ ಮಹಾಸಂಸ್ಥಾನದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ರಥಪೂಜೆ ನೆರವೇರಿಸಿದರು. ಭಕ್ತರು ರಥಕ್ಕೆ ಮಂಡಕ್ಕಿ, ಉತ್ತುತ್ತಿ, ಬಾಳೆ ಹಣ್ಣು ಸಮರ್ಪಿಸಿದರು. ರಥದ ಗಾಲಿಗೆ ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಿಸಿದರು. ‘ಹರಹರ ಮಹಾದೇವ’, ‘ಕರಿಬಸವೇಶ್ವರ ಮಹಾರಾಜ್ ಕಿ ಜೈ’ ಘೋಷಣೆ ಕೂಗುತ್ತಾ ರಥ ಎಳೆದರು.
ಡೊಳ್ಳು ಕುಣಿತ, ನಂದಿ ಕೋಲು ಕುಣಿತ, ಭಜನೆ, ತಮಟೆ, ಪಟ ಕುಣಿತ, ಪುರವಂತರ ವೀರಭದ್ರ ದೇವರ ಕುಣಿತ, ಜೋಡು ನಂದಾದೀಪ, ಗೊಂಬೆ ಕುಣಿತ ರಥೋತ್ಸವಕ್ಕೆ ಮೆರುಗು ತಂದವು. ದೇವಾಲಯ, ರಾಜಬೀದಿಗೆ ವಿದ್ಯುತ್ ಅಲಂಕಾರ ಮಾಡಲಾಗಿತ್ತು.
ರಾಜ್ಯ ಮತ್ತು ಹೊರರಾಜ್ಯದಿಂದ ಬಂದಿದ್ದ ಅಪಾರ ಸಂಖ್ಯೆಯ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.