
ದಾವಣಗೆರೆ: ಮಧ್ಯ ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರವನ್ನು ಉತ್ತೇಜಿಸಲು ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್ಟಿಪಿಐ) ಸ್ಥಾಪನೆಗೆ ಜಿಲ್ಲೆಯಲ್ಲಿ ಭೂಮಿ ಸಿಕ್ಕಿದೆ. ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಿ ಐಟಿ–ಬಿಟಿ ಕಂಪನಿಗಳನ್ನು ಜಿಲ್ಲೆಗೆ ತರುವ ಪ್ರಯತ್ನಕ್ಕೆ ಬಜೆಟ್ನಲ್ಲಿ ಸಕಾರಾತ್ಮಕ ಪ್ರತಿಸ್ಪಂದನೆ ಸಿಗುವ ನಿರೀಕ್ಷೆ ಗರಿಗೆದರಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ ಮೊದಲ ವಾರ ಮಂಡಿಸಲಿರುವ ರಾಜ್ಯ ಬಜೆಟ್ ಅನ್ನು ಜಿಲ್ಲೆಯ ಜನರು ಆಸೆ ಕಂಗಳಿಂದ ಎದುರು ನೋಡುತ್ತಿದ್ದಾರೆ. ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕಾಲೇಜುಗಳಿಂದ ಹೊರಬರುವ ಹತ್ತಾರು ಸಾವಿರ ಪದವೀಧರರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ಕಾರ್ಯ ಸಾಕಾರಗೊಳ್ಳಲಿದೆಯೇ ಎಂಬ ಪ್ರಶ್ನೆ ಮೂಡಿದೆ.
ಮಾಹಿತಿ ತಂತ್ರಜ್ಞಾನ ಕಂಪನಿಗಳು ಮಧ್ಯ ಕರ್ನಾಟಕಕ್ಕೆ ಬಂದರೆ ಉದ್ಯೋಗ ಸಿಗುತ್ತದೆ ಎಂಬುದು ಜನರ ಬಹುದಿನಗಳ ಕನಸು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಒಂದಷ್ಟು ಪ್ರಯತ್ನಗಳು ನಡೆದಿವೆ. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಜೊತೆಗೆ ಜಿಲ್ಲಾಡಳಿತ ಚರ್ಚಿಸಿದೆ. ಬೆಂಗಳೂರಿನಲ್ಲಿ ನಡೆದ ತಂತ್ರಜ್ಞಾನ ಶೃಂಗದಲ್ಲಿ ಪಾಲ್ಗೊಂಡು ಕಂಪನಿಗಳಿಗೆ ಆಹ್ವಾನ ನೀಡಿದೆ. ದಾವಣಗೆರೆ ತಾಲ್ಲೂಕಿನ ವಡ್ಡಿನಹಳ್ಳಿಯಲ್ಲಿ 2 ಎಕರೆ ಭೂಮಿ ಮಂಜೂರು ಮಾಡಿ ಎಸ್ಟಿಪಿಐಗೆ ಹಸ್ತಾಂತರಿಸಿದೆ.
ದಾವಣಗೆರೆಯಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರ ಸ್ಥಾಪಿಸಿದರೆ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲು ಸಾಧ್ಯ ಎಂಬುದು ನವೋದ್ಯಮಿಗಳ ಅಭಿಪ್ರಾಯ. ಇದರಿಂದ ‘ಎ’ ದರ್ಜೆಯ ಮೂಲಸೌಲಭ್ಯಗಳನ್ನು ಕಲ್ಪಿಸಲು ಅಗತ್ಯ ಅನುದಾನ ಲಭಿಸಲಿದೆ. ಹಸಿರು ಇಂಧನ, ಔಷಧ ವಿಜ್ಞಾನ ಸೇರಿದಂತೆ ಹಲವು ನವೋದ್ಯಮ (ಸ್ಟಾರ್ಟಪ್) ಸ್ಥಾಪನೆಗೂ ಬಂಡವಾಳ ಹರಿದುಬರುವ ಸಾಧ್ಯತೆ ಇದೆ.
ಬೃಹತ್ ಕೈಗಾರಿಕೆಗೆ ಬೇಡಿಕೆ
ಹತ್ತಿ ಗಿರಣಿಗಳ ಬೆನ್ನಲ್ಲೇ ಹರಿಹರದ ಕಿರ್ಲೋಸ್ಕರ್ ಕಾರ್ಖಾನೆ ಬಾಗಿಲು ಮುಚ್ಚಿದ ಬಳಿಕ ಕೈಗಾರಿಕಾ ವಲಯದಲ್ಲಿ ನಿರ್ವಾತ ಸ್ಥಿತಿ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ದೊಡ್ಡ ಉದ್ಯಮ ಸ್ಥಾಪಿಸಲು ಆದ್ಯತೆ ನೀಡಬೇಕು ಎಂಬ ಬಹುದಿನಗಳ ಬೇಡಿಕೆ ಸರ್ಕಾರದ ಮುಂದಿದೆ. ಕೈಗಾರಿಕಾ ಕಾರಿಡಾರ್, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಬಡಾವಣೆ, ಕೃಷಿ ಸಂಬಂಧಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂಬುದು ಕೈಗಾರಿಕೋದ್ಯಮಿಗಳ ಒತ್ತಾಯ.
‘ವಿಮಾನ ನಿಲ್ದಾಣ, ವೈದ್ಯಕೀಯ ಕಾಲೇಜು ಸ್ಥಾಪನೆ ಆಗಬೇಕೆಂಬ ಜನರ ದಶಕಗಳ ಬೇಡಿಕೆಗೆ ಈ ಬಾರಿಯ ಬಜೆಟ್ನಲ್ಲಿ ಮನ್ನಣೆ ಸಿಗುವ ನಿರೀಕ್ಷೆ ಇದೆ. ಕೃಷಿ ಸಂಬಂಧಿ ಕೈಗಾರಿಕೆಗಳನ್ನು ಸ್ಥಾಪಿಸಿದರೆ ರೈತರಿಗೆ ಅನುಕೂಲವಾಗಲಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಕಾರ್ಯದರ್ಶಿ ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ ಮಾಹಿತಿ ನೀಡಿದರು.
ಏತ ನೀರಾವರಿಗೆ ಪ್ರತ್ಯೇಕ ಇಲಾಖೆ
‘ಏತ ನೀರಾವರಿ ಯೋಜನೆಗಳು ರಾಜಕೀಯ ಒತ್ತಡದಿಂದ ರೂಪುಗೊಂಡಿವೆಯೇ ಹೊರತು ತಾಂತ್ರಿಕವಾಗಿ ಸುಸ್ಥಿತಿಯಲ್ಲಿ ಇಲ್ಲ. ಈ ಏತ ನೀರಾವರಿ ಯೋಜನೆಗಳ ನಿರ್ವಹಣೆಯನ್ನು ಸಣ್ಣ ನೀರಾವರಿ ಇಲಾಖೆಗೆ ನೀಡಲಾಗಿದೆ. ಇಲ್ಲಿ ವಿದ್ಯುತ್ ಬಳಕೆ ಮಾಡುವುದರಿಂದ ಹೆಚ್ಚಿನ ಅನುದಾನದ ಅಗತ್ಯವಿದೆ. ಏತ ನೀರಾವರಿಗೆ ಪ್ರತ್ಯೇಕ ಇಲಾಖೆ ಸೃಜಿಸುವ ಅಗತ್ಯವಿದೆ. ಆಗ ಮಾತ್ರ ಈ ಯೋಜನೆಗಳು ಸಫಲವಾಗಲು ಸಾಧ್ಯ’ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಭತ್ತ, ಮೆಕ್ಕೆಜೋಳ ಹಾಗೂ ಅಡಿಕೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಅಕ್ಕಿಗೆ ವಿದೇಶದಲ್ಲಿ ಬೇಡಿಕೆ ಸೃಷ್ಟಿಯಾಗಿ ಪ್ರಸಕ್ತ ವರ್ಷ ಉತ್ತಮ ಬೆಲೆ ಸಿಕ್ಕಿದೆ. ಮೆಕ್ಕೆಜೋಳ ಖರೀದಿ ಮಾಡುತ್ತಿದ್ದ ಕಾರ್ಗಿಲ್ ಕಂಪನಿ ಬಾಗಿಲು ಮುಚ್ಚಿದೆ. ಮೆಕ್ಕೆಜೋಳದ ಮೌಲ್ಯವರ್ಧನೆಗೆ ಪ್ರಯತ್ನಗಳು ನಡೆಯಬೇಕು ಎಂಬುದು ರೈತರ ಕೋರಿಕೆ. ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂಬ ಒತ್ತಾಯವಿದೆ.
ಅಭಿವೃದ್ಧಿಯಾಗಲಿ ತಾಲ್ಲೂಕು
ನ್ಯಾಮತಿ ತಾಲ್ಲೂಕು ರಚನೆಯಾಗಿ 8 ವರ್ಷ ಕಳೆದಿದೆ. ಆದರೆ, ಈವರೆಗೂ ತಾಲ್ಲೂಕು ಕೇಂದ್ರದ ರೂಪ ಪಡೆದಿಲ್ಲ. ಮಿನಿ ವಿಧಾನಸೌಧ ಸೇರಿದಂತೆ ಸರ್ಕಾರಿ ಕಚೇರಿಗಳು ನಿರ್ಮಾಣವಾಗಿಲ್ಲ. ಪ್ರಸಕ್ತ ಬಜೆಟ್ನಲ್ಲಿ ತಾಲ್ಲೂಕಿಗೆ ಅನುದಾನ ಸಿಗಬಹುದೇ ಎಂಬುದು ಜನರ ನಿರೀಕ್ಷೆ.
ಕಂದಾಯ ಮತ್ತು ಕೃಷಿ ಇಲಾಖೆ ಹೊರತುಪಡಿಸಿ ಬೇರೆ ಯಾವ ಇಲಾಖೆಯ ತಾಲ್ಲೂಕು ಕಚೇರಿಗಳು ಇಲ್ಲಿ ನಿರ್ಮಾಣವಾಗಿಲ್ಲ. ಉಪನೋಂದಣಾಧಿಕಾರಿ ಕಚೇರಿ, ನ್ಯಾಯಾಲಯ ಸೇರಿದಂತೆ ಇತರ ಸೇವೆಗಳಿಗೆ ಜನರು ಹೊನ್ನಾಳಿಗೆ ಅಲೆಯಬೇಕಾಗಿದೆ. ತಾಲ್ಲೂಕಿನ ಹಲವು ಹಳ್ಳಿಗಳು ಸರ್ಕಾರಿ ಬಸ್ ಸೌಲಭ್ಯದಿಂದ ವಂಚಿತವಾಗಿವೆ.
ಕೃಷಿ ಉತ್ಪನ್ನಗಳ ಬೆಲೆ ಸ್ಥಿರೀಕರಣಕ್ಕೆ ‘ಆವರ್ತ ನಿಧಿ’ಗೆ ಹೆಚ್ಚಿನ ಅನುದಾನ ಮೀಸಲಿಟ್ಟು ಬಳಕೆ ಆಗುವಂತೆ ನೋಡಿಕೊಳ್ಳಬೇಕು. ಬೆಲೆ ಕುಸಿತ ಉಂಟಾದಾಗ ಇದು ರೈತರ ಕೈಹಿಡಿಯಲಿದೆ.– ತೇಜಸ್ವಿ ಪಟೇಲ್, ರೈತ ಮುಖಂಡ
ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯನ್ನು ಉತ್ತೇಜಿಸಲು ದಾವಣಗೆರೆಯಂತಹ 2ನೇ ಹಂತದ ನಗರಗಳಲ್ಲಿ ಕೈಗಾರಿಕೆಗೆ ಉತ್ತೇಜನ ನೀಡಬೇಕು. ಕೈಗಾರಿಕೆ ಸ್ಥಾಪನೆಯ ವ್ಯವಸ್ಥೆ ಸರಳೀಕರಣಗೊಳಿಸಬೇಕು– ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ, ಕಾರ್ಯದರ್ಶಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ
ಬೈರನಪಾದ ಯೋಜನೆ ಚುನಾವಣಾ ಚರ್ಚೆಯ ವಿಷಯವಾಗಿದೆಯೇ ಹೊರತು ಕಾರ್ಯಗತ ಆಗುತ್ತಿಲ್ಲ. ಅನುದಾನ ಒದಗಿಸಿದರೆ 15 ಗ್ರಾಮಗಳ ರೈತರಿಗೆ ಅನುಕೂಲವಾಗುತ್ತದೆ– ಜಿ. ಪ್ರಭುಗೌಡ, ರೈತ ಮುಖಂಡ ಹರಿಹರ
ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಮಂಜೂರು ಮಾಡಬೇಕು. ಇಲ್ಲವಾದರೆ ಕಾಮಗಾರಿಗಳು ಸ್ಥಗಿತವಾಗಿ ನೀರಾವರಿ ಕನಸು ಈಡೇರುವುದಿಲ್ಲ.– ಜೆ.ಯಾದವ ರೆಡ್ಡಿ, ಮುಖಂಡರು ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ
ಕಾರ್ಯಗತ ಆಗಲಿ ಏತ ನೀರಾವರಿ
– ಇನಾಯತ್ ಉಲ್ಲಾ ಟಿ.
ಹರಿಹರ: ಭದ್ರಾ ಕಾಲುವೆ ಜಾಲ ಇದ್ದರೂ ತಾಲ್ಲೂಕಿನ ಹತ್ತಾರು ಗ್ರಾಮ ವ್ಯಾಪ್ತಿಯ ಸಾವಿರಾರು ಎಕರೆ ಜಮೀನಿಗೆ ನೀರು ದುಸ್ತರವಾಗಿದೆ. ಈ ಜಮೀನುಗಳಿಗೆ ತುಂಗಭದ್ರಾ ನದಿಯಿಂದ ನೀರುಣಿಸುವ ಯೋಜನೆಯೇ ಬೈರನಪಾದ ಏತ ನೀರಾವರಿ ಯೋಜನೆ.
2019ರಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ ಈ ಯೋಜನೆಗೆ ₹ 58.13 ಕೋಟಿ ಅನುದಾನ ಮೀಸಲಿಟ್ಟು ಆಡಳಿತಾತ್ಮಕ ಒಪ್ಪಿಗೆಗೆ ನಿರೀಕ್ಷಿಸಲಾಗಿತ್ತು. ಆದರೆ ಈವರೆಗೆ ಈ ಯೋಜನೆಗೆ ಮುಕ್ತಿ ಸಿಕ್ಕಿಲ್ಲ. ರೈತರ ಬಹುದಿನಗಳ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸುವುದೇ ಎಂಬ ನಿರೀಕ್ಷೆ ಮೂಡಿದೆ.
4000 ಕಾರ್ಮಿಕರಿಗೆ ಕೆಲಸ ನೀಡುತ್ತಿದ್ದ ಮೈಸೂರು ಕಿರ್ಲೋಸ್ಕರ್ ಕಾರ್ಖಾನೆ 2001ರಿಂದ ಬಾಗಿಲು ಮುಚ್ಚಿದೆ. 400 ಕಾರ್ಮಿಕರಿಗೆ ಉದ್ಯೋಗ ನೀಡುತ್ತಿದ್ದ ಕಾರ್ಗಿಲ್ ಕಂಪನಿಯು ಈಗ ಏದುಸಿರು ಬಿಡುತ್ತಿದೆ. ಇದರಿಂದ ನೆಲಕಚ್ಚಿದ ನಗರಕ್ಕೆ ಆರ್ಥಿಕ ಚೈತನ್ಯ ಇನ್ನೂ ಸಿಕ್ಕಿಲ್ಲ.
ನಗರದ ಸರ್ವತೋಮುಖ ಬೆಳವಣಿಗೆಗೆ ಚಿಮ್ಮು ಹಲಗೆಯೆಂದರೆ ಉಪಕರಣ ತಯಾರಿಕಾ ಕೈಗಾರಿಕೆ (ಟೂಲ್ ಇಂಡಸ್ಟ್ರಿ). ಸರ್ಕಾರಿ ಎಂಜಿನಿಯರಿಂಗ್ ನರ್ಸಿಂಗ್ ಕಾಲೇಜು ಪ್ರವಾಸೋದ್ಯಮ ಬೆಳವಣಿಗೆಗೆ ಉತ್ತೇಜನ ಸಿಗಬೇಕಿದೆ. ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ ಸುಧಾರಣೆಯ ನಿರೀಕ್ಷೆಯೂ ಇದೆ.
ಭದ್ರಾ ಮೇಲ್ದಂಡೆಗೆ ಬೇಕಿದೆ ಅನುದಾನ
–ಡಿ. ಶ್ರೀನಿವಾಸ್
ಜಗಳೂರು: ಬಯಲುಸೀಮೆ ಎಂದೇ ಹೆಸರಾಗಿರುವ ತಾಲ್ಲೂಕಿನ ಪಾಲಿಗೆ ಮಹತ್ವವಾಗಿರುವ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಅನುದಾನ ಹಾಗೂ ಮಹಿಳಾ ಕಾರ್ಮಿಕರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವ ಜವಳಿ ಕೈಗಾರಿಕೆ ಸ್ಥಾಪನೆಯಾಗಬೇಕಿದೆ.
ಈ ನಿಟ್ಟಿನಲ್ಲಿ ರಾಜ್ಯ ಬಜೆಟ್ ಬಗ್ಗೆ ತಾಲ್ಲೂಕಿನ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ತಾಲ್ಲೂಕಿನ 45 ಸಾವಿರ ಎಕರೆಗೆ ನೀರುಣಿಸುವ ಮತ್ತು 8 ಕೆರೆಗಳನ್ನು ತುಂಬಿಸುವ ಭದ್ರಾ ಮೇಲ್ದಂಡೆ ಯೋಜನೆ ಅನುದಾನದ ಕೊರತೆಯಿಂದ ನಾಲ್ಕೈದು ವರ್ಷಗಳಿಂದ ಕುಂಟುತ್ತ ಸಾಗಿದೆ.
ರಾಜ್ಯ ಸರ್ಕಾರ ಕಳೆದ ಬಾರಿ ಬಜೆಟ್ನಲ್ಲಿ ಮೀಸಲಿಟ್ಟ ಅನುದಾನ ಕೂಡ ಬಿಡುಗಡೆ ಮಾಡಿಲ್ಲ. ತಾಲ್ಲೂಕಿನ ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ಹೊಟ್ಟೆಪಾಡಿಗಾಗಿ ಕೂಲಿ ಅರಸಿಕೊಂಡು ಗುಳೆ ಹೋಗುತ್ತಿದ್ದಾರೆ. ಗುಳೆ ಸಮಸ್ಯೆಯನ್ನು ಹೋಗಲಾಡಿಸುವ ದಿಸೆಯಲ್ಲಿ ಜಗಳೂರು ತಾಲ್ಲೂಕಿನಲ್ಲಿ ಗಾರ್ಮೆಂಟ್ಸ್ ಕೈಗಾರಿಕೆಗಳನ್ನು ನಿರ್ಮಿಸುವ ಬೇಡಿಕೆ ದಶಕಗಳಿಂದ ಇದೆ. ರಾಜ್ಯ ಬಜೆಟ್ನಲ್ಲಿ ಜವಳಿ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಅನುದಾನ ಸಿಗಬಹುದೇ ಎಂಬುದು ಇಲ್ಲಿನ ಕೂಲಿ ಕಾರ್ಮಿಕರ ನಿರೀಕ್ಷೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.