ದಾವಣಗೆರೆ: ಹಲವು ಕಡೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳು ಒಮ್ಮೆ ಹಾಳಾದಾಗ ಮತ್ತೆ ದುರಸ್ತಿ ಮಾಡದೇ ನಿರುಪಯೋಗವಾಗಿರುವುದನ್ನು ಕಂಡಿದ್ದೇನೆ. ಹಾಗಾಗದಂತೆ ಎಚ್ಚರದಂತೆ ಬಳಸಬೇಕು ಎಂದು ದಾವಣಗೆರೆ ಉತ್ತರ ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ಎನ್ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ಕ್ರಾಸ್ ವಾರ್ಷಿಕ ಚಟುವಟಿಕೆಗಳಿಗೆ, ಹಳೆ ವಿದ್ಯಾರ್ಥಿ ಸಂಘಕ್ಕೆ ಚಾಲನೆ, ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ ಪ್ರಯೋಗಾಲಯಗಳ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜು ಕಲಿಕೆ ಎಂಬುದು ವಿದ್ಯಾರ್ಥಿಗಳ ಬದುಕಿನ ತಿರುವಿನ ಘಟ್ಟ. ಇಲ್ಲಿ ನಿಮ್ಮ ಆಯ್ಕೆಗೆ ಸರಿಯಾಗಿ ಹಾಳು ಅಥವಾ ಒಳ್ಳೆಯ ಮಾರ್ಗಗಳಲ್ಲಿ ನಡೆಯುತ್ತೀರಿ. ಉತ್ತಮವಾಗಿ ಓದಿ, ನಿಮ್ಮ ಮನೆಗೆ, ಕಾಲೇಜಿಗೆ, ಉಪನ್ಯಾಸಕರಿಗೆ ಒಳ್ಳೆಯ ಹೆಸರು ತನ್ನಿ ಎಂದು ಹಾರೈಸಿದರು.
ಪಾಲಿಕೆ ಆಯುಕ್ತ ಮಂಜುನಾಥ ಆರ್. ಬಳ್ಳಾರಿ ಮಾತನಾಡಿ, ‘ಇಂದಿನ ವಿದ್ಯಾರ್ಥಿಗಳೇ ನಮ್ಮ ಯುವಶಕ್ತಿ. ಪದವಿ ಮುಗಿದ ಬಳಿಕ ಏನಾಗಬೇಕು ಎಂದು ಚಿಂತನೆ ನಡಸುವ ಕಾಲ ಇದು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದು, ನೌಕರಿ ಗಳಿಸುವುದಷ್ಟೇ ಜೀವನವಲ್ಲ. ರಾಷ್ಟ್ರಪ್ರೇಮ, ರಾಷ್ಟ್ರ ರಕ್ಷಣೆ, ಪರಿಸರ ಪ್ರೇಮ, ಕಟ್ಟಕಡೆಯ ವ್ಯಕ್ತಿಗಳ ಬಗ್ಗೆ ಕಾಳಜಿ ಹೊಂದುವುದೂ ಅಷ್ಟೇ ಅಗತ್ಯ’ ಎಂದು ಸಲಹೆ ನೀಡಿದರು.
ದಾವಣಗೆರೆ ಸ್ಮಾರ್ಟ್ ಸಿಟಿ ಆಗುತ್ತಿದೆ. ಅದಕ್ಕೆ ಸರಿಯಾಗಿ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯೂ ನಡೆಯಲಿದೆ. ನಿಮ್ಮ ಬೇಡಿಕೆಗಳಿಗೆ ಶಾಸಕರು, ಸಚಿವರ ಜತೆಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಾಂಶುಪಾಲ ಪ್ರೊ. ಶಂಕರ್ ಆರ್. ಶೀಲಿ ಅಧ್ಯಕ್ಷತೆ ವಹಿಸಿದ್ದರು. ಬೈಲಹೊಂಗಲದ ಪ್ರಾಧ್ಯಾಪಕ ಡಾ. ಸಂಗಮನಾಥ ಎಂ. ಲೋಕಾಪೂರ, ನಿವೃತ್ತ ಪ್ರಾಂಶುಪಾಲ ಡಾ.ಕೆ.ಎಂ. ಮಲ್ಲಿಕಾರ್ಜುನ, ಪತ್ರಾಂಕಿತ ವ್ಯವಸ್ಥಾಪಕ ಎಸ್.ಆರ್. ಭಜಂತ್ರಿ, ಐಕ್ಯುಎಸಿ ಸಂಚಾಲಕರಾದ ಪ್ರೊ. ಟಿ. ವೀರೇಶ್, ಡಾ. ಜಿ.ಎಂ. ದಿನೇಶ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಪ್ರಸಾದ್ ಉಪಸ್ಥಿತರಿದ್ದರು.
ಪ್ರಾಧ್ಯಾಪಕಿ ಎಸ್.ಎಂ. ಗೌರಮ್ಮ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಎಂ.ಕೆ. ದಾನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಜಿ.ಸಿ. ಸದಾಶಿವಪ್ಪ ವಂದಿಸಿದರು. ಪ್ರೊ. ಎಸ್.ಎಂ. ಲತಾ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.