ADVERTISEMENT

ಶಿಷ್ಯವೇತನಕ್ಕಾಗಿ ವೈದ್ಯಕೀಯ ವಿದ್ಯಾರ್ಥಿಗಳಿಂದ ಪತ್ರ ಚಳವಳಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 15:26 IST
Last Updated 5 ಜುಲೈ 2020, 15:26 IST
ಶಿಷ್ಯವೇತನಕ್ಕಾಗಿ ಜೆ.ಜೆ.ಎಂ. ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಬರೆದಿರುವ ಪತ್ರಗಳು
ಶಿಷ್ಯವೇತನಕ್ಕಾಗಿ ಜೆ.ಜೆ.ಎಂ. ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಬರೆದಿರುವ ಪತ್ರಗಳು   

ದಾವಣಗೆರೆ: 16 ತಿಂಗಳ ಶಿಷ್ಯವೇತನಕ್ಕೆ ಆಗ್ರಹಿಸಿ ಜೆ.ಜೆ.ಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಭಾನುವಾರ ಪತ್ರ ಚಳವಳಿ ನಡೆಸಿದರು.

ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗೆ ತಲಾ ಒಂದೊಂದು ಪತ್ರ ಬರೆಯುವ ಮೂಲಕ 230 ವಿದ್ಯಾರ್ಥಿಗಳು ಪತ್ರ ಚಳವಳಿ ಆರಂಭಿಸಿದರು.

‘ಭಾನುವಾರ ನಿಷೇಧಾಜ್ಞೆ ಇದ್ದುದರಿಂದ ಪತ್ರಗಳನ್ನು ಸೋಮವಾರ ಪೋಸ್ಟ್ ಮಾಡಲಾಗುವುದು’ ಎಂದು ಡಾ.ಹರೀಶ್ ತಿಳಿಸಿದರು.

ADVERTISEMENT

‘ನಾನು ಸರ್ಕಾರಿ ಕೋಟಾದಡಿ ಸೀಟನ್ನು ಪಡೆದಿದ್ದು, 16 ತಿಂಗಳಿಂದ ನಮಗೆ ಶಿಷ್ಯವೇತನ ಬಾರದೇ ಕಾಲೇಜು ಹಾಗೂ ಹಾಸ್ಟೆಲ್ ಶುಲ್ಕ ಭರಿಸಿಲ್ಲ. ಇತರೆ ಖರ್ಚುಗಳಿಗೆ ಇದನ್ನೇ ನಂಬಿಕೊಂಡಿದ್ದು, ಶಿಷ್ಯವೇತನ ಸಿಗದೇ ತುಂಬಾ ಕಷ್ಟವಾಗಿದೆ. ಆದರೂ ನಾವು ನಮ್ಮ ಕರ್ತವ್ಯವನ್ನು ನಿಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಆದ್ದರಿಂದ ಕೂಡಲೇ ಶಿಷ್ಯವೇತನ ಬಿಡುಗಡೆ ಮಾಡಬೇಕು’ ಎಂದು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.

‘ನಿಷೇಧಾಜ್ಞೆ ಇದ್ದುದರಿಂದ ಹಾಸ್ಟೆಲ್‌ ಮುಂಭಾಗದಲ್ಲಿ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಪತ್ರ ಚಳವಳಿ ನಡೆಸಿದ್ದೇವೆ. ಸೋಮವಾರ ಸಭೆಗೆ ನಡೆಯುತ್ತದೆ ಎಂದು ಹೇಳಿದ್ದಾರೆ. ಆಆದರೆ ನಮ್ಮನ್ನು ಯಾರೂ ಕರೆದಿಲ್ಲ. ಲಿಖಿತ ಭರವಸೆ ನೀಡುವ ತನಕ ಧರಣಿ ನಿಲ್ಲಿಸವುದಿಲ್ಲ. ಸೋಮವಾರ ಜಯದೇವ ವೃತ್ತದಲ್ಲಿ ಧರಣಿ ಮುಂದುವರಿಸುತ್ತೇವೆ’ ಎಂದು ಹರೀಶ್ ತಿಳಿಸಿದರು.

ಎಐಡಿಎಸ್‌ಒ ಖಂಡನೆ

ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡದೇ ಇರುವುದನ್ನು ಎಐಡಿಎಸ್‍ಒ ಜಿಲ್ಲಾ ಸಮಿತಿ ಖಂಡಿಸಿದೆ.

‘ವಿದ್ಯಾರ್ಥಿಗಳು ನಡೆಯುತ್ತಿರುವ ಈ ಧರಣಿಯನ್ನು ಸರ್ಕಾರ ಕಿಂಚಿತ್ತೂ ಪರಿಗಣನೆಗೆ ತೆಗೆದುಕೊಳ್ಳದೇ ಇರುವುದು ವಿಷಾದನೀಯ. ಹಲವು ತಿಂಗಳುಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ, ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೂ ಸರ್ಕಾರ ಯಾವುದೇ ಪರಿಹಾರವನ್ನು ನೀಡಿಲ್ಲ. ಕೇವಲ ಹುಸಿ ಆಶ್ವಾಸನೆಗಳನ್ನು ನೀಡುತ್ತಿದೆ’ ಎಂದು ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷೆ ಸೌಮ್ಯ ಜೆ. ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.